Tuesday, July 7, 2009

ಹಾಸ್ಟೆಲ್ನ ನೆನಪಿಗೆ.....

ನಾಳೆ ನನ್ನ ಹಾಸ್ಟೆಲ್ ಜೀವನದ ಕೊನೆಯ ದಿನ..ಏನನ್ನು ಬರೆಯಬೇಕೆಂದು ತೋಚುತ್ತಿಲ್ಲ.. ಎಲ್ಲಿಂದಲೋ ಬಂದು ಗೆಳೆಯರಾಗಿ, ರೂಮ್ ಮೇಟಗಳಾಗಿ ಇದ್ದವರು ಪುನಃ ಬಂದಂತೆ ಹಿಂತಿರುಗಿ ಹೋಗಿದ್ದಾರೆ. ಬದುಕಿನ ಅತ್ಯಂತ ಒಳ್ಳೆಯ ದಿನಗಳನ್ನು ನಾನಿಲ್ಲಿ ಕಳೆದಿದ್ದೇನೆ.. ಬಿಟ್ಟು ಹೋಗಲು ಮನಸಿಲ್ಲದಿದ್ದರೂ ಹೋಗಲೇಬೇಕಾಗಿದೆ..ಕೂಪ ಮಂಡೂಕನಂತಿದ್ದ ನನಗೆ ಜೀವನದ ಪಾಠ ಹೇಳಿಕೊಟ್ಟ ಶಾಲೆ ಈ ಹಾಸ್ಟೆಲ್.. ನಾಲ್ಕು ವರ್ಷ ನಾಲ್ಕು ಹಾಸ್ಟೆಲ್ ಬ್ಲಾಕುಗಳು.. ನಾನಿದ್ದ ಪ್ರತಿಯೊಂದು ಹಾಸ್ಟೆಲ್ ಬ್ಲಾಕಿನ ಒಂದೊಂದು ರೂಮಿನೊಂದಿಗೂ ಅನೇಕ ನೆನೆಪುಗಳು ಇವೆ.. ಅವೆಲ್ಲವುಗಳ ನೆನಪಿಗೆ ಈ ಪೋಸ್ಟ್....












ನನ್ನೆಲ್ಲ ಗೆಳೆಯರಿಗೂ ಹಾಗೂ ಈ ನಾಲ್ಕು ವರ್ಷಗಳಲ್ಲಿ ನಮ್ಮೆಲ್ಲರಿಗೂ 'ಅನ್ನದಾತ'ರಾದ ಹಾಸ್ಟೆಲ್ ಮೆಸ್ ನ ಸಿಬ್ಬಂದಿ ವರ್ಗದವರಿಗೆ ನಾನು ಚಿರಋಣಿ.. Hostel Life, I miss u....

Thursday, June 18, 2009

ಹಿಚ್ಕಡ ಕುರ್ವೆ

ಅಂಕೋಲೆಯ ಕಡೆ ಮಳೆ ಜೋರಾಗಿ ನಾಲ್ಕಾರು ದಿನ ಬಿತ್ತೆಂದರೆ ಪ್ರಚಾರಕ್ಕೆ ಬರುವ ಸ್ಥಳವೆಂದರೆ ಕುರ್ವೆ, ಒಂದು ಚಿಕ್ಕ ದ್ವೀಪ. ಅಂಕೋಲೆಯ ಗಂಗೆ ಗಂಗಾವಳಿ(ಗೆಳೆಯ ತೇಜುವಿನ ಹೊಸ ನಾಮಕರಣ 'ನಮ್ ಗಂಗು') ನದಿ ಧಾರವಾಡದ ಹತ್ತಿರ ಆಗಮಿಸಿ ಅಂಕೋಲಾ ಮತ್ತು ಕುಮಟಾ ತಾಲೂಕಿನ ಸರಹದ್ದಿನಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ನದಿಯ ಮುಖಜಭೂಮಿಯಿಂದ 4 ಕಿ.ಮೀ. ಹಿಂದೆ ವಜ್ರಾಕಾರದ ಈ ಪುಟ್ಟ ದ್ವೀಪವಿದೆ. ನದಿ ಮಧ್ಯದಲ್ಲಿರುವ ಇಂತಹ ಚಿಕ್ಕ ದ್ವೀಪಗಳಿಗೆ ಸಾಮಾನ್ಯವಾಗಿ 'ಕುರ್ವೆ' ಎನ್ನುತ್ತಾರೆ. ಉತ್ತರ ಕನ್ನಡದಲ್ಲಿ ಅಘನಾಶಿನಿ ನದಿಯ ಐಗಳ ಕುರ್ವೆ, ಶರಾವತಿ ನದಿಯ ಮಾವಿನಕುರ್ವೆ ಹೀಗೆ ನಾಲ್ಕಾರು ಪ್ರಸಿದ್ದವಾದ ಕುರ್ವೆಗಳಿವೆ. ಸಾಮಾನ್ಯವಾಗಿ ಸಮೀಪದಲ್ಲಿರೋ ಊರ ಹೆಸರಿನಿಂದಲೋ ಅಥವಾ ಅಲ್ಲಿ ವಾಸಿಸುವ ಜನಾಂಗದ ಹೆಸರಿನಿಂದಲೇ ಆ ಕುರ್ವೆಯನ್ನು ಕರೆಯಲಾಗುತ್ತದೆ. ನಮ್ಮ ಈ ಕುರ್ವೆಯ ಸಮೀಪದಲ್ಲಿ ಹಿಚ್ಕಡ ಎಂಬ ಊರು ಇರುವುದರಿಂದ ಇದನ್ನು 'ಹಿಚ್ಕಡ ಕುರ್ವೆ' ಎಂದು ಕರೆಯುತ್ತಾರೆ.





ಸುಮಾರು 44 ಎಕರೆ ವಿಸ್ತೀರ್ಣದ ಈ ನಡುಗಡ್ಡೆಯ ತುಂಬ ತೆಂಗಿನಮರಗಳು ಇವೆಯೆಂದು ಕೇಳಿದ್ದೆ. ಮೊನ್ನೆ ಮೇ ತಿಂಗಳ ಕೊನೆಯಲ್ಲಿ ಮನೆಗೆ ಹೋದಾಗ ಅಲ್ಲಿಗೆ ಹೋಗಿಬಂದಾಯಿತು.. ಈ ಹಿಂದೆ ಚಿಕ್ಕವನಿರುವಾಗ ಕಾಳಿನದಿಯಲ್ಲಿ ಮರದ ದೋಣಿಯಲ್ಲಿ ಹೋಗಿದ್ದನ್ನು ಬಿಟ್ಟರೆ ಇನ್ನೆಲ್ಲ ಕಡೆ ನದಿ ದಾಟುವಾಗ ಯಾಂತ್ರೀಕೃತ ಬಾರ್ಜಲ್ಲೇ ಹೋಗಿದ್ದು.. ಆದ್ದರಿಂದ ಸುಮಾರು ಒಂದು ದಶಕದ ನಂತರ ಪುನ: ಮರದ ಚಿಕ್ಕ ದೋಣಿಯಲ್ಲು ಹೋಗುವ ಅವಕಾಶ ಸಿಕ್ಕಿತ್ತು..ಕಾಳಿನದಿಯ ಆ ದೋಣಿಗಳಾದರೂ ಸುಮಾರು 12 ರಿಂದ 16 ಜನರನ್ನು ಕೊಂಡೊಯ್ಯುವ ಸಾಮರ್ಥ್ಯವುಳ್ಳವಾದ್ದರಿಂದ ಆ ದೋಣಿಗಳ ಮೇಲೆ ಹೋಗಲು ಅಷ್ಟೊಂದು ಭಯವಾಗುತ್ತಿರಲಿಲ್ಲ. ಆದರೆ ಈ ಪುಟ್ಟ ದೋಣಿಯ ಮೇಲೆ ಹೆದರುತ್ತಲೇ ನಾನು ಮತ್ತು ತೇಜು ಕುರ್ವೆ ಕಾಲಿಟ್ಟಾಯಿತು.. ನದಿ ಮಧ್ಯದಲ್ಲಿ ಸಾಗುವಾಗ ದೂರದಲ್ಲಿನ ಗಂಗಾವಳಿ ರೈಲ್ವೆ ಬ್ರಿದ್ಜು , ನದಿ ಇನ್ನೊಂದು ತೀರದಲ್ಲಿರುವ ಇನ್ನು ಕೆಲ ಹಳ್ಳಿಗಳು ಕಣ್ಣಿಗೆ ಮುದ ನೀಡುತ್ತಿದ್ದವು. ಕೆಲ ನಿಮಿಷಗಳಲ್ಲೇ ಕುರ್ವೆ ದಡ ತಲುಪಿದರೂ ಸಹ ಪುನಃ ಮನೆಗೆ ಹೋಗುವಾಗ ಆ ಪುಟ್ಟ ದೋಣಿಯ ಮೇಲೆ ಹೋಗಬೇಕೆಂಬ ಭಯ ನನಗೆ..

ತೆಂಗಿನ ತೋಟಗಳಿಂದಲೇ ತುಂಬಿದ ಕುರ್ವೆಯಲ್ಲಿ ಸುಮಾರು ಇಪ್ಪತ್ತೈದು ಕುಟುಂಬಗಳಿದ್ದು ಒಂದು ಶಾಲೆ ಇದೆ. ವಿದ್ಯುತ್ತಿನ ಸಂಪರ್ಕ ಕೂಡ ಇದೆ. ತೋಟಗಾರಿಕೆ ಮತ್ತು ಮೀನುಗಾರಿಕೆಯ ಮೇಲೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಅಲ್ಲಲ್ಲಿ 'ಪಾರ್ಕಿಂಗ್' ಮಾಡಿದ ದೋಣಿಗಳೂ ಕೂಡ ಕಣ್ಣಿಗೆ ಬೀಳುತ್ತಿದ್ದು ಕೆಲವೆಡೆ 'ಕಲ್ಗ' ಎನ್ನೋ ವಿಶೇಷವಾದ ಜೀವಿಗಳಿರೋ ಕಲ್ಲುಗಳು (ಊರ ಕಡೆ ಈ ಕಲ್ಲುಗಳನ್ನು ಕಲ್ಗನ ಮುಯ್ಡು ಎನ್ನುತ್ತಾರೆ) ಕಾಣಸಿಗುತ್ತಿದ್ದವು. ಕೆಲ ತೆಂಗಿನಮರಗಳು ದಂಡೆಯಿಂದ ನಭದೆಡೆಗೆ ನೆಗೆಯುತ್ತಿದ್ದಂತೆ ಭಾಸವಾಗುತ್ತಿದ್ದರೆ ಇನ್ನು ಕೆಲವು ನದಿ ನೀರನ್ನು ಚುಂಬಿಸಲು ಹವಣಿಸುತ್ತಿದ್ದಂತೆ ಅನಿಸುತ್ತಿತ್ತು.





ಇನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಈ ದ್ವೀಪವನ್ನು ಚಳುವಳಿಗಾರರು ಭೂಗತವಾಗುವುದಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಈ ನಡುಗಡ್ಡೆಯಲ್ಲಿರುವಾಗ ಗಂಗಾವಳಿ ನಮ್ಮನ್ನು ಸುತ್ತುವರೆದಿದ್ದರಿಂದ "ನಾ ಖೈದಿ ನೀನೆ ಸೆರೆಮನೆ" ಎಂಬ ಮುಂಗಾರುಮಳೆಯ ಲೈನ್ ನೆನಪಿಗೆ ಬರುತಿತ್ತು. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಈ ಸ್ಥಳದ ಬಗ್ಗೆ ಪ್ರೊ.ಜಿ.ಎಚ್.ನಾಯಕರು "ಪ್ರಕೃತಿಯೇ ಸೌಂದರ್ಯದ ಚಿತ್ರ ಬಿಡಿಸಿದಂತೆ ಇದೆ ಸುತ್ತಮುತ್ತಲಿನ ವಾತಾವರಣ" ಎಂದು ಒಂದೆಡೆ ಬರೆದಿದ್ದಾರೆ. ಆದರೆ ಇಲ್ಲಿನ ಜನರು ತೊಂದರೆಗೊಳಗಾಗುವುದು ಮಳೆಗಾಲದಲ್ಲಿ. ಭಾರೀ ಮಳೆ ಸುರಿಯಿತೆಂದರೆ ಸಾಕು ನಮ್ ಗಂಗುವಿನ ನೀರಿನ ಮಟ್ಟವೇರಿ ಈ ದ್ವೀಪ ಮುಳುಗಲು ಪ್ರಾರಂಭವಾಗುತ್ತದೆ. ಆಗ ಇಲ್ಲಿನ ಜನರಿಗೆ ಆಶ್ರಯ ನೀಡುವ ಸ್ಥಳಗಳೆಂದರೆ ಎಡ ದಂಡೆಯ ಮೇಲಿರುವ ಹಿಚ್ಕಡ ಊರಿನ ಗಂಜಿಕೇಂದ್ರ ಹಾಗೂ ಬಲ ದಂಡೆಯ ಮೇಲಿರುವ ಅಗ್ಗರಗೋಣ ಅಥವಾ ಸಗಡಗೇರಿ ಶಾಲೆಯಲ್ಲಿ ಶುರುಮಾಡುವ ಗಂಜೀಕೇಂದ್ರಗಳು..ಇನ್ನೊಮ್ಮೆ ಮಳೆಗಾಲ ಪ್ರಾರಂಭವಾಗಿದೆ. ನಮ್ ಗಂಗು ಎನಾದರೂ ಮೈತುಂಬ ಹರಿದರೆ ಮತ್ತೆ ಇಲ್ಲಿನ ಜನರಿಗೆ ಕಷ್ಟ ತಪ್ಪಿದ್ದಲ್ಲ. ಕಳೆದ ಬಾರಿಯೂ ಕುರ್ವೆಯನ್ನು ಮುಳುಗಿಸಿ ಮಂತ್ರಿಗಳೇ ಆಶ್ರಯ ತಾಣಗಳಿಗೆ ಬರುವಂತೆ ಮಾಡಿದ್ದ ನಮ್ ಗಂಗು ಈ ಬಾರಿಯಾದರೂ ಇಲ್ಲಿನ ಜನರ ಮೇಲೆ ಕೃಪೆ ತೋರುವಳೇ ಎಂದು ನೋಡಬೇಕಾಗಿದೆ.

Tuesday, June 2, 2009

ಅಂಕೋಲೆಯ ಕಡಲತೀರಗಳು

"It may be a fraction.. but still it counts" ಎನ್ನುತ್ತಲೇ ಸ್ವಲ್ಪ ಅಂಕಿ-ಅಂಶಗಳನ್ನು ಹೇಳಿ ಮುಂದೆ ಹೋಗುವೆ. ನಮ್ಮ ದೇಶವು 7516 ಕಿ.ಮೀ.ಗಳಷ್ಟು ಉದ್ದದ ಕಡಲತೀರವನ್ನು ಹೊಂದಿದೆ. ಅದರಲ್ಲಿ ಕರ್ನಾಟಕದ ಪಾಲು 320 ಕಿ.ಮೀ.ಗಳು. ಕರ್ನಾಟಕ ಕರಾವಳಿ ಪ್ರದೇಶವು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಂಚಿಹೋಗಿದೆ. ಉತ್ತರ ಕನ್ನಡದ ಕರಾವಳಿ ಪ್ರದೇಶ 140 ಕಿ.ಮೀ.ಗಳು. ಉತ್ತರ ಕನ್ನಡದ ಒಟ್ಟು 11 ತಾಲೂಕುಗಳಲ್ಲಿ 5 ತಾಲೂಕುಗಳು ಕರಾವಳಿ ತಾಲೂಕುಗಳು. ಅವುಗಳೆಂದರೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ. ನಮ್ಮ ಅಂಕೋಲೆಯ ಕರಾವಳಿ ತೀರ ಸುಮಾರು 18.5 ಕಿ.ಮೀ. ಗಳು. ಅಂದ್ರೆ 0.24 ಶೇಕಡಾ :) ಹಾರವಾಡ, ಬೇಲೇಕೇರಿ, ಬಾವಿಕೇರಿ, ಕೇಣಿ, ಅಂಕೋಲ ಪಟ್ಟಣ, ತೆಂಕಣಕೇರಿ, ನದಿಬಾಗ, ಬೆಳಂಬಾರ, ವಾಡಿಬೊಗ್ರಿ, ಹೊನ್ನೆಬೈಲ್, ಮಂಜಗುಣಿ ಊರುಗಳು ಅಂಕೋಲಾ ತಾಲೂಕಿನ ತೀರ ಪ್ರದೇಶವನ್ನು ಹಂಚಿಕೊಂಡಿವೆ. ಅಂಕೋಲೆಯ ಕಡಲ ತೀರ ಪ್ರದೇಶವು ಅನೇಕ ಮಹತ್ವ ಸ್ಥಳಗಳನ್ನು ಹೊಂದಿದೆ.

ಬ್ರಿಟಿಷರ ಕಾಲದಿಂದಲೂ ಉತ್ತಮ ಬಂದರಾಗಿರುವ ಬೇಲೇಕೇರಿಯು ಇಂದು ಕರ್ನಾಟಕದ ೧೦ ಮುಖ್ಯ ಬಂದರುಗಳಲ್ಲಿ ಒಂದು. ಅಲ್ಲದೇ ಉತ್ತಮ ಕಡಲ ಕಿನಾರೆಯನ್ನು ಹೊಂದಿರುವ ಈ ತೀರಕ್ಕೆ “Beach which has a potential of International Tourism” (ಅಂತರಾಷ್ಟ್ರೀಯ ಪ್ರವಾಸಯೋಗ್ಯ ಸಮುದ್ರತೀರ) ಎಂದು ಮಾನ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿರುವ “ಅ” ಶ್ರೇಣಿಯ ಕೇವಲ ೫ ಸಮುದ್ರದಂಡೆಗಳಲ್ಲಿ ಬೇಲೇಕೇರಿಯೂ ಒಂದು. ಇದು ಕೇವಲ ಉತ್ತಮ ಬಂದರು ಮಾತ್ರವಲ್ಲದೇ ಉತ್ತಮ ಪ್ರವಾಸೀತಾಣವೂ ಆಗಿದ್ದು ಇಲ್ಲಿನ ಸೂರ್ಯಾಸ್ತ ನಯನಮನೋಹರ.




ಬೇಲೇಕೇರಿ

ಹೊನ್ನೆಬೈಲ್ ನ ಸಮುದ್ರದಂಡೆ ಸಹ ಇತ್ತೀಚೆಗೆ “ಹೊನ್ನೆ ಬೀಚ್” ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಇತ್ತೀಚೆಗೆ ರೆಸಾರ್ಟ್ ವ್ಯವಸ್ಥೆಯನ್ನು ಕೂಡ ಇಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಅಂಕೋಲಾ ಪಟ್ಟಣದಿಂದ ಸುಮಾರು 2-3 ಕಿ.ಮೀ.ದೂರದಲ್ಲಿರುವ ನದಿಭಾಗದ ಕಡಲತೀರವೂ ಸಹ ತನ್ನ ಹಾಲ್ನೊರೆಯ ಅಲೆಗಳಿಂದ ಮನಮೋಹಕವಾಗಿದೆ. ಪಕ್ಕದಲ್ಲೇ ಬಸಕಲ್ಲು ಗುಡ್ಡವಿದ್ದು ಅದರ ತುದಿಯಿಂದ ಸಮುದ್ರವನ್ನು ನೋಡಬಹುದು. ಮಳೆಗಾಲದ ಸಮಯದಲ್ಲಿ ಹೆಚ್ಚಿನ ನೀರು ಹೊರಬಂದು "ಕೋಡಿ" ಉಂಟಾಗಿ ಒಂದು ಚಿಕ್ಕ ಹಳ್ಳವನ್ನೇ ನಿರ್ಮಿಸುತ್ತದೆ. ಇದನ್ನು ಗೆಝೆಟಿಯರಗಳಲ್ಲೆಲ್ಲ ಅಂಕೋಲಾ 'ನದಿ'ಯೆಂದು ಕರೆದರೂ ಸಹ ನದಿ ಎಂಬ ಸ್ಥಾನಮಾನ ಸ್ವಲ್ಪ ಹೆಚ್ಚೇ ಆಯಿತೇನೋ ಎಂಬ ಭಾವನೆ ನನ್ನದು. ವಾತದ ಔಷಧಿಗೆ ಹೆಸರುವಾಸಿಯಾಗಿರುವ ಬೆಳಂಬಾರ ಸಹ ಕಡಲತೀರದಲ್ಲಿರುವ ಊರು.ಮೀನುಗಾರಿಕೆಗೆ ಹೆಸರಾದ ಊರು. ಆದರೆ ನಿರಂತರ ಕಡಲ್ಗೊರೆತದ ಕಾರಣ ಪ್ರವಾಸೋದ್ಯಮದ ದೃಷ್ಟಿಯಿಂದ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿರುವುದಿಲ್ಲ.


ಹೊನ್ನೆ ಬೀಚ್


ಬೆಳಂಬಾರ

"Coastal Ecosystems of the Karnataka State, India" ಪುಸ್ತಕದಲ್ಲಿ ಕರ್ನಾಟಕದ ಎಲ್ಲ ಕಡಲತೀರಗಳ ಜೈವಿಕ ವ್ಯವಸ್ಥೆಯ ಬಗ್ಗೆ ಮಾಹಿತಿಯಿದ್ದು ಎಲ್ಲ ಕಡಲತೀರಗಳನ್ನು ಅವುಗಳ ಗುಣಧರ್ಮಗಳ ಆಧಾರದ ಮೇಲೆ ರೇಟಿಂಗ್ ಮಾಡಲಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅಂಕೋಲೆಯ ಕಡಲತೀರಗಳ ರೇಟಿಂಗ್ ಇಂತಿದೆ.

ಮಂಜುಗುಣಿ ( ಗಂಗಾವಳಿ ನದಿಯ ಮುಖಜಭೂಮಿ ಇರುವ ಪ್ರದೇಶ) ........B
ಹೊನ್ನೆಬೈಲು..............C
ಬೆಳಂಬಾರ..............E
ನದಿಬಾಗ್.........E (ಪ್ರಾಕೃತಿಕವಾಗಿ ಸುಂದರ ತೀರವಾದರೂ ಕಡಲ್ಗೊರೆತಕ್ಕೆ ತುತ್ತಾಗುತ್ತಿದೆ)
ಬೊಬ್ರುವಾಡ...........E
ಬಾವಿಕೇರಿ.............B
ಬೇಲೇಕೇರಿ................A
ಹಾರವಾಡ.............B

ನದಿಬಾಗ

ದೂರದ ಧಾರವಾಡದಿಂದ ಅಂಕೋಲೆಯನ್ನು ಅರಸುತ್ತ ಇಲ್ಲಿಗೆ ಹರಿದು ಬಂದ ಗಂಗಾವಳಿ ನದಿಯು ಸಮುದ್ರ ಸೇರುವುದು ಅಂಕೋಲಾ ಮತ್ತು ಕುಮಟಾ ತಾಲೂಕುಗಳ ಕಡಲತೀರದ ಸರಹದ್ದಿನಲ್ಲಿ.ಅಷ್ಟೇನೂ ವಿಶಾಲವಲ್ಲದ ಮುಖಜಭೂಮಿ ಕೂಡ ನಿರ್ಮಾಣವಾಗಿದೆ. ಮೀನುಗಾರಿಕೆಗೆ ವಿಪುಲ ಅವಕಾಶವಿದ್ದು ಅನೇಕ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಅಲ್ಲದೇ ಕೆಲವು ಊರುಗಳಲ್ಲಿ ಸಮುದ್ರದ ನೀರಿನಿಂದ ಉಪ್ಪನ್ನು ಕೂಡ ತಯಾರಿಸಲಾಗುತ್ತದೆ.



ನಾನೂ ಮೊದಲು ಇದು ಮರಳಿನ ರಾಶಿಯೆಂದೇ ತಿಳಿದಿದ್ದೆ!!

ಅಂಕೋಲೆಯ ಉಪ್ಪಿನ ತಯಾರಿಕೆಗೆ ಸುಮಾರು ಇನ್ನೂರರಿಂದ ಮುನ್ನೂರು ವರ್ಷಗಳ ಇತಿಹಾಸವಿದ್ದು ಅನೇಕ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ. ಅಲ್ಲದೇ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ 'ಕರ್ನಾಟಕದ ಬಾರ್ಡೋಲಿ' ಎಂದೆನಿಕೊಂಡ ಅಂಕೋಲೆ ಕರಾವಳಿ ತೀರದಲ್ಲಿಲ್ಲದಿದ್ದರೆ ಈ ಹೆಸರು ಬರುತ್ತಿರಲಿಲ್ಲವೋ ಎನೋ... ಏಕೆಂದರೆ ಅಂಕೋಲೆಯಲ್ಲಿ ಚಳುವಳಿ ಪ್ರಾರಂಭವಾದದ್ದೇ ಉಪ್ಪಿನ ಸತ್ಯಾಗ್ರಹದ ಮೂಲಕ!!

ಹೀಗೆ ಕರಾವಳಿ ಸಂಪತ್ತನ್ನು ಹೊಂದಿರುವ ಅಂಕೋಲೆಯಲ್ಲಿ ಅದು ಸಂಪೂರ್ಣವಾಗಿ ವಿನಿಯೋಗವಾಗುತ್ತಿಲ್ಲ. ಪರಿಸರಕ್ಕೆ, ಜನರಿಗೆ ಹೆಚ್ಚು ಹಾನಿಯಾಗದಂತೆ ಆಧುನೀಕತೆ ತರುವುದು ಕಷ್ಟವಾದರೂ ಸಹ ಅಸಾಧ್ಯವೇನಲ್ಲ. ಅಲ್ಲದೇ ಕೆಲ ಕಡಲತೀರಗಳು ಕಡಲ್ಗೊರೆತಕ್ಕೆ ತುತ್ತಾಗಿರುವುದರಿಂದ ಆ ತೀರಗಳಿಗೂ ಇಂದು ರಕ್ಷಣೆ ಬೇಕಿದೆ.

Monday, May 4, 2009

ಕರ್ಣಾಟಕ ಸಂಘ ಗ್ರಂಥಾಲಯ,ಗೋಕರ್ಣ

ಪ್ರತಿ ಬಾರಿ ಊರಿಗೆ ಹೋಗುವಾಗಲೂ ಆ ಬಾರಿ ಎಲ್ಲೆಲ್ಲಿ ಹೋಗಬೇಕು ಎಂಬ ಲಿಸ್ಟಂತೂ ಬ್ಯಾಗ್ ನಲ್ಲಿರುತ್ತದೆ. ಮೊನ್ನೆ ಚುನಾವಣೆ ಸಮಯದಲ್ಲಿ ಹೋದಾಗ ಕೂಡ ಗೋಕರ್ಣದಲ್ಲಿ ಕರ್ಣಾಟಕ ಸಂಘದ ಲೈಬ್ರರಿಗೆ ಒಮ್ಮೆ ಹೋಗಿ ಬರಬೇಕು ಎಂಬುದನ್ನು ನಿರ್ಧರಿಸೇ ಹೊರಟಿದ್ದೆ. ಗೋಕರ್ಣವೆಂದರೆ ಮೊದಲು ನೆನಪಿಗೆ ಬರುವುದು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ. (ಈಗೀಗ ಓಮ್ ಬೀಚ್, ಕುಡ್ಲೆ ಬೀಚ್ ಗಳ ಪ್ರಸಿದ್ಧಿ ಗೋಕರ್ಣವೊಂದು ತೀರ್ಥಕ್ಷೇತ್ರವೂ ಹೌದು ಎಂಬುದನ್ನು ಮರೆಸುತ್ತಿರುವುದು ಬೇರೆ ಮಾತು). 'ದಕ್ಷಿಣ ಕಾಶಿ' ಎಂದೇ ಪ್ರಸಿದ್ದಿ ಪಡೆದಿರುವ ಗೋಕರ್ಣ ನಮ್ಮನೆಯಿಂದ ಅಬ್ಬಬ್ಬಾ ಅಂದ್ರೆ 30 ರಿಂದ 35 ಕಿ.ಮೀ.ಗಳಷ್ಟು ದೂರದಲ್ಲಿದೆ. ಹಲವಾರು ಬಾರಿ ಆ ಕಡೆ ಹೋಗಿದ್ದರೂ ಅಲ್ಲೊಂದು ಹಳೆಯ ಗ್ರಂಥಾಲಯವಿದೆ ಎಂಬುದು ತಿಳಿದಿರಲಿಲ್ಲ. ಕೆಲವು ದಿನಗಳ ಹಿಂದೆ ಕರ್ನಾಟಕ ಗೆಝೆಟಿಯರ್ ನಲ್ಲಿ ಕರ್ನಾಟಕದ ಕೇಂದ್ರ ಗ್ರಂಥಾಲಯದ ನಂತರ ಗೋಕರ್ಣದ ಕರ್ಣಾಟಕ ಸಂಘದ ಗ್ರಂಥಾಲಯವನ್ನು ಉಲ್ಲೇಖಿಸಿದ್ದನ್ನು ನೋಡಿ ನಮ್ಮ ಗೋಕರ್ಣದಲ್ಲಿಯೂ ಉತ್ತಮ ಗ್ರಂಥಾಲಯವೊಂದಿದೆ ಎಂದು ತಿಳಿಯಿತು. ಕಾಲೇಜಿನಲ್ಲಿ ನನ್ನ ಸಹಪಾಠಿಯಾಗಿರುವ ಗೋಕರ್ಣದ ಗಣಪತಿ ಭಟ್ಟನಲ್ಲಿ ವಿಚಾರಿಸಿದಾಗ "ಹೌದು ಇದೆ. ಆದರೆ ಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಈಗ ಓದುಗರು ಬರುವುದು ಕೂಡ ಕಡಿಮೆ.ಖ್ಯಾತ ನಿರ್ದೇಶಕ ಸುನಿಲ್ ಕುಮಾರ ದೇಸಾಯಿಯವರೂ ಕೂಡ ಅಲ್ಲಿಗೆ ಬಂದು ಅನೇಕ ಹಳೆಯ ಕಾದಂಬರಿಗಳನ್ನು ಓದಿ ಹೋಗಿದ್ದಾರಂತೆ' ಎಂದು ತನ್ನ ಒಂದೇ ಉಸಿರಿನಲ್ಲಿ ಹೇಳಿ ಮುಗಿಸಿದ.

ಮತದಾನದ ದಿನ ನನ್ನ ಹಕ್ಕನ್ನು ಚಲಾಯಿಸಿ ಗೋಕರ್ಣದ ಕಡೆಗೆ ಹೊರಟೆ. ಗೋಕರ್ಣದ ದಾರಿಯಲ್ಲೇ ಗೆಳೆಯ ಪವನನ ಮನೆಯೂ ಕೂಡ. ಅವನನ್ನು ಕರೆದುಕೊಂಡು ಗೋಕರ್ಣಕ್ಕೆ ತಲುಪಾಯಿತು. 'ತಮ್ಮ ಮನೆಯ ಮುಂದಿನ ಇನ್ನೊಂದು ಬದಿಯಲ್ಲೇ ಆ ಲೈಬ್ರರಿಯಿರುವುದು ಎಂದು ಗಣಪತಿ ಹೇಳಿ ಕಳುಹಿಸಿದ್ದು ಒಳ್ಳೆಯದೇ ಆಗಿತ್ತು. ಇಲ್ಲದಿದ್ದರೆ ಅದನ್ನು ಹುಡುಕುವುದು ಕಷ್ಟವೇ !! ಕಿರಿದಾದ ಮನೆಯ ಮಾಳಿಗೆಯ ಮೇಲೆ ಗ್ರಂಥಾಲಯವಿದೆ.



ಒಳಗೆ ಹೋದೊಡನೆ ರಾಶಿ ರಾಶಿ ಪುಸ್ತಕಗಳು. 'ಗ್ರಂಥಾಲಯದಲ್ಲಿ ಪುಸ್ತಕಗಳಲ್ಲದೇ ಮತ್ತೇನನ್ನು ಕಾಣುವಿರಿ ?'  ಎಂದು ನೀವು ಕೇಳಬಹುದು. ಆದರೆ ಸಾಮಾನ್ಯವಾಗಿ ಎಲ್ಲ ಗ್ರಂಥಾಲಯಗಳಲ್ಲಿ ಓಡಾಡಲು ಸಾಕಷ್ಟು ಜಾಗವಿದ್ದು ನಿರ್ದಿಷ್ಟ ಜಾಗದಲ್ಲಿ ಒಂದು ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಪುಸ್ತಕಗಳನ್ನು ಜೋಡಿಸಿಟ್ಟಿರುತ್ತಾರೆ. ಆದರೆ ಇಲ್ಲಿ ಹಾಗಲ್ಲ. ಕೆಲವು ಕಪಾಟುಗಳನ್ನು ಬಿಟ್ಟರೆ ಇನ್ನು ಉಳಿದೆಡೆ ಸಿಕ್ಕ ಸಿಕ್ಕಲ್ಲಿ ಪುಸ್ತಕಗಳು. ನಾನೇನು ಈ ಗ್ರಂಥಾಲಯವನ್ನು ತೆಗಳುತ್ತಿಲ್ಲ. ಆದರೆ ಒಂದು ಕಾಲದಲ್ಲಿ 400ಕ್ಕೂ ಹೆಚ್ಚು ನಿಯತಕಾಲಿಕಗಳು ಬರುತ್ತಿದ್ದ ಗ್ರಂಥಾಲಯದ ಇಂದಿನ ಸ್ಥಿತಿಯಿದು. ಗ್ರಂಥಪಾಲಕರಾದ ಜಿ.ಎಮ್.ವೇದೇಶ್ವರರನ್ನು ಕೇಳಿದಾಗ 'ಇದೊಂದು ಖಾಸಗಿ ಲೈಬ್ರರಿ. ಹಿಂದೆಲ್ಲ ಓದುಗರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಈಗ ಓದುಗರೂ ಕಡಿಮೆ. ಇಲ್ಲಿರುವ ಬಹುತೇಕ ಪುಸ್ತಕಗಳು ಗೌರವ ಪ್ರತಿಗಳೇ. ಇಂದಿಗೂ ಅನೇಕ ಗೌರವ ಪ್ರತಿಗಳು ಬರುತ್ತಿವೆ. ಆದರೆ ಅವುಗಳನ್ನಿಡಲು ಸ್ಥಳವೆಲ್ಲಿದೆ?ಮನೆಯಲ್ಲಿ ಇನ್ನೂ ಇಪ್ಪತ್ತರಿಂದ ಇಪ್ಪತೈದು ಕಪಾಟುಗಳಷ್ಟು ಪುಸ್ತಕಗಳಿವೆ. ಆದರೆ ಇಡಲು ಸ್ಥಳದ ಅಭಾವ. ಆದ್ದರಿಂದ ಈಗ ಗೌರವ ಪ್ರತಿಗಳನ್ನೂ ಕಳುಹಿಸುವುದು ಬೇಡ ಎಂದೇ ತಿಳಿಸಲಾಗಿದೆ !!' ಎಂದು ಹೇಳಿದರು. 





ಕಡಿಮೆಯೆಂದರೂ ಒಂದರಿಂದ ಒಂದೂವರೆ ಲಕ್ಷಗಳಷ್ಟು ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದಲ್ಲಿ ಹಿಂದೆ ಉತ್ತರ ಕನ್ನಡದಿಂದ ಹೊರಡುತ್ತಿದ್ದ ಅನೇಕ ನಿಯತಕಾಲಿಕಗಳೂ ಇವೆ. ಹೆಚ್ಚಾಗಿ ಕಾದಂಬರಿ, ಸಂಸ್ಕೃತ ವಿಷಯಕ್ಕೆ  ಸಂಬಂಧಿಸಿದ ಪುಸ್ತಕಗಳು ಇಲ್ಲಿದ್ದು ಕರ್ನಾಟಕದ ಇನ್ಯಾವ ಲೈಬ್ರರಿಯಲ್ಲಿ ದೊರಕದ ಹಳೇ ಪುಸ್ತಕಗಳನ್ನು ಹೊಂದಿರುವ ಈ ಗ್ರಂಥಾಲಯದ ಕ್ಯಾಟಲೋಗ್ (ಪುಸ್ತಕಗಳ ಯಾದಿ) ರೆಕಾರ್ಡ ಪುಸ್ತಕಗಳೇ ಐವತ್ತಕ್ಕಿಂತ ಹೆಚ್ಚಿವೆ ಎಂದರೆ ಅದೆಷ್ಟು ಪುಸ್ತಕಗಳಿವೆಯೆಂದು ಅಂದಾಜಿಸಬಹುದಾಗಿದೆ. ಆದರೆ ಗ್ರಂಥಾಲಯದ ಮುಖ್ಯ ಕೊರತೆಯೆಂದರೆ ಪುಸ್ತಕದ ಯಾದಿಯ ಮೂಲಕ ಪುಸ್ತಕ ಗ್ರಂಥಾಲಯದಲ್ಲಿಯೇ ಇದೆ ಎಂಬುದು ತಿಳಿದರೂ ಅದು ಎಲ್ಲಿದೆ ? ಯಾವ ಕಪಾಟಿನಲ್ಲಿದೆ?  ಎಂಬುದನ್ನು ಹುಡುಕುವುದು ಕಷ್ಟ. ಹೀಗೆ ಹಿಂದೊಮ್ಮೆ ಕರ್ನಾಟಕದ ಮುಖ್ಯ ಗ್ರಂಥಾಲಯಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದ ಗ್ರಂಥಾಲಯ ಇಂದು ಸ್ಥಳದ ಹಾಗೂ ವ್ಯವಸ್ಥೆಯ ಕೊರತೆಯಿಂದಾಗಿ ಲಕ್ಷಗಟ್ಟಲೇ ಪುಸ್ತಕಗಳು ಕಾಲಗರ್ಭದಲ್ಲಿ ಮರೆಯಾಗಲು ಸಿದ್ಧವಾಗಿವೆ. ಈ ಗ್ರಂಥಾಲಯ ಖಾಸಗಿ ಗ್ರಂಥಾಲಯವಾಗಿದ್ದರಿಂದ ಎನೋ ಸರಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿರಬಹುದು. ಆದರೆ 'ಪಬ್ಲಿಕ್ ಯುನಿವರ್ಸಿಟಿ' ಎಂದೇ ಕರೆಸಿಕೊಳ್ಳುವ ಇಂತಹ ಗ್ರಂಥಾಲಯಗಳನ್ನು ನವೀಕರಣಗೊಳಿಸಿದ್ದಲ್ಲಿ ಮಾತ್ರ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗಲು ಸಾಧ್ಯ. 

ಒಟ್ಟಿನಲ್ಲಿ ಹಳೆಯ ಲೈಬ್ರರಿಗೊಂದು ಹೋಗಿ ಬಂದ ಖುಷಿಯಿದ್ದರೂ ಮನೆಯಿಂದ ಹೊರಡುವಾಗ ಸಾಧ್ಯವಾದರೆ ನನಗೆ ಬೇಕಾದ ಕೆಲ ಪುಸ್ತಕಗಳ ಬಗ್ಗೆ ವಿಚಾರಿಸಿ ಬರಬೇಕೆಂದು ಮನಸ್ಸಿನಲ್ಲಿ ಅಂದುಕೊಂಡು ಹೋಗಿದ್ದ ನನಗೆ ಆ ಪುಸ್ತಕಗಳು ಅಲ್ಲಿದ್ದರೂ ಸಿಕ್ಕಿರಲಿಲ್ಲ.


Sunday, May 3, 2009

ಹೀಗೆರಡು ಕವನಗಳು

ಅಂದು-ಇಂದು

ಹೋರಾಟದ ನೆಲ ನಮ್ಮ ಅಂಕೋಲೆ
ಬಿಡಿಸಲು ಮುಂದಾಗಿತ್ತು ತಾಯ ಸಂಕೋಲೆ
ಊರು-ಕೇರಿಗಳಲ್ಲಿ ಹತ್ತಿತ್ತು ಸ್ವಾತಂತ್ರ್ಯ ಸಂಗ್ರಾಮದ ಕಿಡಿ
ಎಲ್ಲರ ಗುರಿಯೂ ಒಂದೇ: 'ಮಾಡು ಇಲ್ಲವೇ ಮಡಿ'.

ಇಡೀ ಕರುನಾಡಿಗೆ ಆಯಿತಿದು ಹೋರಾಟಕ್ಕೆ ಮಾದರಿ
ಯಾವ ಹಿಂಸೆಗೂ ಜನರು ಹೋಗಲಿಲ್ಲ ಚದುರಿ
ಕೊನೆಗೂ ದೇಶವಾಯಿತು ದಾಸ್ಯದಿಂದ ಮುಕ್ತಿ
ಇದಕೆ ಕಾರಣ ಜನರ ಒಗ್ಗಟ್ಟಿನಲ್ಲಿದ್ದ ಶಕ್ತಿ.

ಇಂದೆಲ್ಲಿ ಹೋಯಿತು ಅಂದಿನ ಆ ಒಗ್ಗಟ್ಟು?
ಎಲ್ಲರ ಮನಸ್ಸಿನಲ್ಲೂ ಅಧಿಕಾರದ ಪಟ್ಟು
ಪಕ್ಷಗಳಿಂದ ಜನರಲ್ಲಿ ಎದ್ದಿದೆ ಬಿರುಕು
ಇನ್ನಾದರೂ ಆಗಬೇಕು ನಾವೆಲ್ಲ ಚುರುಕು.

ಬನ್ನಿ, ಪುನಃ ಒಂದಾಗೋಣ ನಾವೆಲ್ಲ
ಜೊತೆಗೂಡಿ ತಿನ್ನೋಣ ಬೇವು-ಬೆಲ್ಲ
ಎಲ್ಲರ ಗುರಿಯೂ ಆಗಲಿ ಜನತೆಯ ಸುಖ
ಇಷ್ಟೂ ತಿಳಿಯದಿರೆ ಆತನೊಬ್ಬ ಮೂರ್ಖ.


ಕನಸು

ಮೊನ್ನೆ ಕನಸಲಿ ಆ ದೇವರು ಬಂದ
ನಿನಗಾವ ವರ ಬೇಕು ಬೇಡಿಕೊ ಎಂದ
ಬದುಕಿರುವಾಗಲೇ ಸ್ವರ್ಗವ ಕಾಣಬೇಕು, ನಾನೆಂದೆ
ದೇವರೆಂದ: ಅಂಕೋಲೆಗೆ ಹೋಗೋಣ ನಡಿ ಮುಂದೆ.

ನಾನೆಂದೆ, ಮೊದಲಿನಂತಿಲ್ಲ ಆ ನನ್ನ ತಾಯ್ನಾಡು
ನೀನೇ ಏನಾದರೂ ಪವಾಡ ಮಾಡು
ಒಂದೆಡೆ ಮ್ಯಾಂಗನೀಸ್ ಧೂಳು, ಇನ್ನೊಂದೆಡೆ ಕಾಡೂ ಬೋಳು
ಇನ್ನು ಯಾರ ಕಣ್ಣಿಗೂ ಕಾಣದ ಬಡವನ ಗೋಳು.

ದೇವರೇನು ಹೇಳಲಿಲ್ಲ, ಆತ ಸುಮ್ಮನೆ ನಕ್ಕ
ಅವನ ಆ ನಗೆಗೆ ಮ್ಯಾಂಗನೀಸ್ ಧೂಳು ಚೊಕ್ಕ
ನಿಮಿಷಮಾತ್ರದಲಿ ಬೋಳಾದ ಕಾಡಾಯಿತು ದಟ್ಟ
ಬಡವರೂ ಸ್ಥಿತಿವಂತರಾಗಿ ಸುಧಾರಿಸಿಕೊಂಡರು ತಮ್ಮ ಮಟ್ಟ.

ಆದರೆ ನಾನು ಕಂಡಿದ್ದು ಕನಸು, ನಡೆದಿರಲಿಲ್ಲ ಯಾವ ಮ್ಯಾಜಿಕ್ಕು
ನಾವೇ ಮುರಿಯಬೇಕು ಧೂಳು ಹೆಚ್ಚಿಸುವವರ ಸೊಕ್ಕು
ಕಾಡನ್ನು ಬೆಳೆಸಿ ನಾಡನ್ನು ಮಾಡಬೇಕು ಹಸಿರು
ಬಡವರ ಏಳಿಗೆಯೇ ಆಗಬೇಕು ನಮ್ಮ ಉಸಿರು.

Sunday, April 12, 2009

ಕೆನರಾ ಲೋಕಸಭಾ ಕ್ಷೇತ್ರ

ಮತ್ತೊಮ್ಮೆ ಐದು ವರ್ಷಗಳು ಕಳೆದು ಲೋಕಸಭಾ ಚುನಾವಣೆ ಎದುರಾಗಿದೆ. ನಮ್ಮ ಅಂಕೋಲೆಯಂತೂ ಕಳೆದ ವರ್ಷದ ಏಪ್ರಿಲ್ ತಿಂಗಳ ನಂತರ ಮೂರನೇ ಬಾರಿ(ಮೇ 2008ರಲ್ಲಿ ಕರ್ನಾಟಕದ ಇತರ 223 ವಿಧಾನಸಭಾ ಕ್ಷೇತ್ರಗಳೊಂದಿಗೆ, ಕಳೆದ ಡಿಸೆಂಬರ್ ನಲ್ಲಿ ಉಪಚುನಾವಣೆ, ಏಪ್ರಿಲ್ ನಲ್ಲಿ ಲೋಕಸಭಾ ಚುನಾವಣೆ) ಚುನಾವಣೆಗೆ ಸಿದ್ದವಾಗುತ್ತಿದೆ. ಒಂದು ವರ್ಷದಿಂದ ಪ್ರತಿ ಬಾರಿ ಮನೆಗೆ ಹೋದಾಗ ಚುನಾವಣೆಗೆ ಸಂಬಂಧಪಟ್ಟ ಪೋಸ್ಟರ್ ಗಳು ಕಣ್ಣಿಗೆ ರಾಚುವುದು ಸಾಮಾನ್ಯವಾಗಿ ಹೋಗಿದೆ. ಹಿಂದೆ ಅಂಕೋಲಾ ವಿಧಾನಸಭಾ ಕ್ಷೇತ್ರ ಎಂಬ ಪ್ರತ್ಯೇಕ ಕ್ಷೇತ್ರವಿತ್ತಾದರೂ ಎರದು ವರ್ಷಗಳ ಹಿಂದೆ ನಡೆದ ಕ್ಷೇತ್ರಗಳ ಮರುವಿಂಗಡಣೆಯಲ್ಲಿ ನಮ್ಮ ಅಂಕೋಲೆಯನ್ನು ಕಾರವಾರ ಕ್ಷೇತ್ರದಡಿಯಲ್ಲಿ ವಿಲೀನಗೊಳಿಸಲಾಯಿತು. ಇನ್ನು ಲೋಕಸಭಾ ಕ್ಷೇತ್ರಗಳನ್ನು ತೆಗೆದುಕೊಂಡರೆ ಅಂಕೋಲೆ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಚಿಕ್ಕಂದಿನಲ್ಲಿ ಅನುಕ್ರಮವಾಗಿ ಭಾರತದ ಪ್ರಧಾನಮಂತ್ರಿಗಳ ಹೆಸರನ್ನು, ರಾಷ್ಟ್ರಪತಿಗಳ ಹೆಸರನ್ನು ಬಾಯಿಪಾಠ ಮಾಡುತ್ತಿದ್ದರೂ ನಮ್ಮ ಲೋಕಸಭಾ ಕ್ಷೇತ್ರವನ್ನು ಸಂಸತ್ತಿನಲ್ಲಿ ಹಿಂದೆ ಪ್ರತಿನಿಧಿಸಿದವರು ಯಾರ್ಯಾರು ಎಂಬುದು ನಮಗೆ ತಿಳಿದಿರಲಿಲ್ಲ ಹಾಗೂ ನಾವು ಕೂಡ ತಿಳಿಯಲು ಹೋಗಲಿಲ್ಲ. ಆದರೆ ಎಂದು ಕಾಲಗರ್ಭದಲ್ಲಿ ಅವಿತಿರುವ ಬೇರೆ ಬೇರೆ ಸಂಗತಿಗಳನ್ನು ತಿಳಿಯಲು ಹೊರಟಾಗ ನಿಧಾನವಾಗಿ ಅಜ್ಞಾನದ ಪೊರೆ ನಿಧಾನವಾಗಿ ಕಳೆದುಕೊಳ್ಳಲು ಪ್ರಾರಂಭಿಸಿತು. ಹಿಂದೆ ಶಿವರಾಮ ಕಾರಂತರು ಕೆನರಾ ಕ್ಷೇತ್ರದ ಎಂ.ಪಿ.ಸ್ಥಾನದ ಚುನಾವಣೆಗೆ ನಿಂತಿದ್ದರು ಎಂಬುದನ್ನು ಬಿಟ್ಟರೆ 10ನೇ ಈಯತ್ತೆಯವರೆಗೆ ಕ್ಷೇತ್ರದ ಹಿಂದಿನ ಸಂಸದರ ಬಗ್ಗೆ ತಿಳಿದದ್ದು ಶೂನ್ಯವೇ. ಅಂಕೋಲೆಯಲ್ಲಿ ಪಿ.ಯು. ಓದುತ್ತಿರುವಾಗ ಪೇಟೆಯಲ್ಲೊಮ್ಮೆ ಹಿಂದಿನ ಸಂಸದ ಬಿ.ವಿ.ನಾಯಕರನ್ನು ಗೆಳೆಯ ಮಹೇಂದ್ರ ತೋರಿಸಿದ್ದ ನೆನಪು. ಮನೆಗೆ ಬಂದು ತಂದೆಯವರ ಬಳಿ ಕೇಳಿದಾಗ 'ಅವರು ಕಾಂಗ್ರೆಸ್ಸಿನಲ್ಲಿದ್ದುಕೊಂಡೇ ಪಾರ್ಲಿಮೆಂಟನಲ್ಲಿ ಇಂದಿರಾಗಾಂಧಿಯವರನ್ನು ಪ್ರಶ್ನಿಸಿದವರು. ಜ್ಞಾನಜೀವಿಗಳು' ಎಂದು ಹೇಳಿದ್ದರು. ಕೆಲ ತಿಂಗಳುಗಳ ಹಿಂದೆ ಹೀಗೆ ಅಂತರ್ಜಾಲದಲ್ಲಿ ಅತ್ತಿತ್ತ ಸುಳಿದಾಡುತ್ತಿರುವಾಗ ಕೆನರಾ ಕ್ಷೇತ್ರದ ಸಂಸದರ ಹೆಸರನ್ನು ಹುಡುಕಿ ಅಚಾನಕ್ಕಾಗಿ ಸಿಕ್ಕಿಂದ ಲಿಂಕು ಇದು. ಲಿಂಕಿನಲ್ಲಿ ಇಲ್ಲಿಯವರೆಗೆ ಸ್ಪರ್ಧೆಗೆ ನಿಂತ ಇಲ್ಲ ವಿಧಾನಸಭಾ ಹಾಗೂ ಲೋಕಸಭಾ ಅಭ್ಯರ್ಥಿಗಳು ಗಳಿಸಿದ ವೋಟುಗಳ ಅಂಕಿಅಂಶಗಳಿವೆ. ಲಿಂಕನ್ನು ಬಳಸಿ ಚುನಾವಣಾ ಆಯೋಗದ ಸೈಟನ್ನು ಜಾಲಾಡಿದಾಗ ಮತ್ತು ಇನ್ನು ಕೆಲ ಮೂಲಗಳನ್ನು ನಮ್ಮ ಕೆನರಾ ಕ್ಷೇತ್ರದ ಬಗ್ಗೆ ತಿಳಿದಿದ್ದಿಷ್ಟು.



ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್
(ಬೆಳಗಾವಿಯ ಕಿತ್ತೂರು ಮತ್ತು ಖಾನಾಪುರ ಕ್ಷೇತ್ರಗಳೂ ಕೂಡ ಕೆನರಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುತ್ತವೆ.)
1947ರಲ್ಲಿ ಸ್ವಾತಂತ್ರ್ಯ ಬಂದರೂ ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದಿದ್ದು 1956ರಲ್ಲಿ. 1956ರವರೆಗೆ ಉತ್ತರ ಕನ್ನಡ ಬ್ರಿಟಿಷರ ಆಡಳಿತದಲ್ಲಿದ್ದಂತೆಯೇ ಬಾಂಬೇ ಪ್ರಾಂತ್ಯದಲ್ಲಿತ್ತು. ಅಂದರೆ ಮೊದಲ ಮಹಾಚುನಾವಣೆಯನ್ನು (1951ರಲ್ಲಿ) ಬಾಂಬೇ ಪ್ರಾಂತ್ಯದಡಿಯಲ್ಲಿ ಕೆನರಾ ಕ್ಷೇತ್ರ ಎದುರಿಸಿತು. ಚುನಾವಣೆಯಲ್ಲಿ ಗೆದ್ದವರು ಜೆ.ಪಿ.ಆಳ್ವಾ ಅವರು. ಮುಂದಿನ ಎರಡು ಲೋಕಸಭಾ ಚುನಾವಣೆಗಳಲ್ಲೂ (1957 ಮತ್ತು 1962) ಇವರೇ ಜಯಭೇರಿ ಬಾರಿಸಿ ಹ್ಯಾಟ್ರಿಕ್ ಸಾಧಿಸಿದರು.ಬಾಂಬೇ ಪ್ರಾಂತ್ಯದ "ಸರ್ವೋದಯ" ಯೋಜನೆಗಳೆಲ್ಲ ಅಂಕೋಲೆಯಲ್ಲಿ ಯಶಸ್ವಿಯಾಗಿ ಕಾರ್ಯಗತಗೊಂಡದ್ದು ಇವರು ಪ್ರತಿನಿಧಿಯಾಗಿದ್ದಾಗಲೇ.

ಇವರ
ನಂತರ ಸಂಸತ್ತಿಗೆ ಆಯ್ಕೆಯಾದವರು ಉತ್ತರ ಕನ್ನಡದಲ್ಲಿ ಶಿಕ್ಷಣದ ಕಿಚ್ಚನ್ನು ಹೊತ್ತಿಸಿದ ಮಾನ್ಯ ದಿನಕರ ದೇಸಾಯಿಯವರು. ಯಾವ ಪಕ್ಷದ ಹಂಗಿಲ್ಲದೇ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ದೇಸಾಯಿಯವರು ಸಂಸತ್ತಿನಲ್ಲಿ ಶ್ರೇಷ್ಠ ಶಿಕ್ಷಣತಜ್ಞರಾಗಿಯೂ ಗುರುತಿಸಿಕೊಂಡಿದ್ದರು. ಅಲ್ಲದೇ ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಕೆಲ ಪಾರ್ಲಿಮೆಂಟರಿ ಸಮಿತಿಗಳ ಸದಸ್ಯರೂ ಆಗಿದ್ದರು. ರೈತರ ಅಭಿವೃದ್ಧಿಗೆ ಸಾಕಷ್ಟು ದುಡಿದ ಇವರು ಲೋಕಸಭೆಯಲ್ಲಿ ತಾವು ಕಂಡದ್ದನ್ನು ತಮ್ಮ ಚುಟುಕುಗಳಲ್ಲಿ ರೀತಿ ಹೇಳುತ್ತಾರೆ.

ಲೋಕಸಭೆಯಲಿ ಹೋಗಿ ನಾ ಕುಳಿತುಕೊಂಡೆ
ದುರ್ಬೀನು ಹಚ್ಚಿ ಇಡಿ ಭಾರತವ ಕಂಡೆ
ಒಂದು ಕಡೆ ಕೋಟಿ ದಶ ಕೋಟಿ ದೌಲತ್ತು
ಉಳಿದ ಕಡೆ ಪಾಪ ಬಾಯಿಗೆ ಇಲ್ಲ ತುತ್ತು.

1971 ರಲ್ಲಿ ದಿನಕರರ ಉತ್ತರಾಧಿಕಾರಿಯಾಗಿ ಬಂದ ಕಾಂಗ್ರೆಸ್ಸಿನ ಬಿ.ವಿ.ನಾಯಕರು ಕೆನರಾ ಕ್ಷೇತ್ರ ಮಾತ್ರವಲ್ಲ ಇಡೀ ರಾಜ್ಯವೇ ಕಂಡ ಮೇಧಾವಿ ಎಂ.ಪಿ.ಗಳಲ್ಲೊಬ್ಬರು. ಅಘನಾಶಿನಿ ನದಿಯ ಗಜನಿ ಭೂಮಿ ಬಿಣಗೆಯ ರಾಸಾಯನಿಕ ಕೈಗಾರಿಕೆಯ ತಿಕ್ಕೆಗೆ ಸರಿದಾಗ ಅದನ್ನು ತಮ್ಮ ಹೋರಾಟದಿಂದ ಕಸಿದು ಪುನಃ ರೈತರಿಗೆ ನೀಡಿದ್ದ ಇವರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಎಂ.ಪಿ. ಎನ್ನುವ ಅಧಿಕಾರ ಮದ ಎಂದಿಗೂ ಇವರಲ್ಲಿ ಕಾಣಿಸಿಕೊಂಡಿರಲಿಲ್ಲ ಎಂಬುದನ್ನು ಇವರನ್ನು ಬಲ್ಲವರು ಹೇಳುತ್ತಾರೆ. ಇವರು "ಎರಡನೆಯ ಗಣರಾಜ್ಯದತ್ತ", "Future of Global Society" ಎಂಬ ವೈಚಾರಿಕ ಪುಸ್ತಕಗಳನ್ನೂ ಬರೆದು ಇಂದಿಗೂ ತಮ್ಮ ವಿಚಾರಗಳ ಮೂಲಕ ಜನತೆಯಲ್ಲಿ ನೆಲೆಸಿದ್ದಾರೆ. ಕಳೆದ ಮಳೆಗಾಲದ ಸಮಯದಲ್ಲಿ ಇವರು ತೀರಿಕೊಂಡರು.

1977ರಲ್ಲಿ ಆರನೇ ಲೋಕಸಭೆಗೆ ಕ್ಷೇತ್ರದಿಂದ ಆಯ್ಕೆಯಾದವರು ಬಿ.ಪಿ.ಕದಮ್ ರವರು. ಆಗ ಮಾತ್ರ ದೇಶ ತುರ್ತು ಪರಿಸ್ಥಿತಿಯ ಅಸಹ್ಯ ವಾತವರಣದಿಂದ ಹೊರಗೆ ಬಂದಿತ್ತು. ದೇಶದಲ್ಲಿ ಕಾಂಗ್ರೆಸ್ ಹೀನಾಯ ಸೋಲನ್ನು ಉಂಡು ಜನತಾ ಪಾರ್ಟಿಯ ಮೊರಾರ್ಜಿ ದೇಸಾಯಿಯವರು ಪ್ರಧಾನಮಂತ್ರಿಗಳಾಗಿದ್ದರು.ಕಾಂಗ್ರೆಸ್ ಪರವಾಗಿ ಪಾರ್ಲಿಮೆಂಟ್ ನಲ್ಲಿ ಕೂತ ಕೆಲವೇ ಕೆಲವು ಜನರಲ್ಲಿ ಇವರೂ ಒಬ್ಬರು. ಹಿಂದೆ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಇವರು ತಮ್ಮ ಜನಮನ್ನಣೆಯಿಂದ ಸಂಸತ್ತಿಗೆ ಬಡ್ತಿಯನ್ನು ಪಡೆದಿದ್ದರು. ಬಿ.ಪಿ.ಕದಮ್ ನಂತರ ಪಾರ್ಲಿಮೆಂತಗೆ ಕಾಲಿಟ್ಟವರು ಸಿದ್ದಾಪುರದ ದೇವರಾಯ ಜಿ. ನಾಯ್ಕರು. 1980ರಲ್ಲಿ ಮೊದಲ ಬಾರಿಗೆ ಸಂಸದರಾದ ಇವರು ಸಮಾಜವಾದಿ ಚಿಂತಕರು. ಪುನಃ 1984,1989 ಹಾಗೂ 1991ರಲ್ಲಿ ಲೋಕಸಭೆಗೆ ಆಯ್ಕೆಯಾದರು. 1989ರಲ್ಲಿ ಇವರ ವಿರುದ್ದ ನಿಂತವರು ಶಿವರಾಮ ಕಾರಂತರು. ಪರಿಸರ ವಿರೋಧಿ ಯೋಜನೆಗಳ ಆಗರ ವಾಗುತ್ತಿರುವ ಉತ್ತರ ಕನ್ನಡವನ್ನು ಉಳಿಸಲು ಹಾಗೂ ಕೈಗಾ ಯೋಜನೆ ಉತ್ತರ ಕನ್ನಡದಲ್ಲಿ ಬೇರು ಬಿಡುವುದನ್ನು ತಡೆಯಲು ಪಕ್ಷೇತರರಾಗಿ ಇವರು ನಿಂತಿದ್ದರು.ಆದರೆ ಇವರ ಪ್ರಕೃತಿ ಪ್ರೀತಿಗೆ ಸ್ಪಂದಿಸದ ನಾವು ಪ್ರತೀ ಹತ್ತು ವೋಟಿಗೆ ಒಂದರಂತೆ ನೀಡಿ ಪರಿಸರದ ಬಗ್ಗೆ ನಮ್ಮ ಕಾಳಜಿಯನ್ನು ಮೆರೆದಿದ್ದೆವು!!!. 'ನಿಮ್ಮ ಸೋಲಿನ ಬಗ್ಗೆ ಏನೆನ್ನುತ್ತೀರಿ' ಎಂದು ಕಾರಂತರನ್ನು ಪತ್ರಕರ್ತರು ಕೇಳಿದಾಗ 'ಇದು ನನಗಾದ ಸೋಲಲ್ಲ. ಇಡೀ ಉತ್ತರ ಕನ್ನಡಕ್ಕಾದ ಸೋಲು' ಎಂದಾಗ ಕೂಡ ಎಚ್ಚರವಾಗದ ಜನತೆ ಇನ್ನೂ ನಮ್ಮ ಉತ್ತರಕನ್ನಡದಲ್ಲಿದ್ದಾರೆ. ಆಗ ಉತ್ತರಕನ್ನಡದ ಸಾಕ್ಷರತೆ ಸುಮಾರು ಶೇ.50 ಆಸುಪಾಸಿನಲ್ಲಿತ್ತು. ಎಲ್ಲ ಸಾಕ್ಷರರೂ ಕನಿಷ್ಠ ಲೋಕವಿವೇಕವನ್ನು ಹೊಂದಿದ್ದರೂ ಕೂಡ ಕಾರಂತರೂ ಅಂದು ಗೆಲ್ಲುತ್ತಿದ್ದರು.ಆದರೆ ಹಾಗಾಗಲಿಲ್ಲ. ನಮ್ಮ ಜಿಲ್ಲೆಯಲ್ಲಿ ತಾಯ(ಪ್ರಕೃತಿ) ಬಗ್ಗೆ ಕಾಳಜಿ ಉಳ್ಳವರು ಕೇವಲು ಹತ್ತರಲ್ಲಿ ಒಬ್ಬರು ಅನ್ನೋದು ಮಾತ್ರ ನಾಚಿಕೆಗೇಡು.

1996ರಲ್ಲಿ ಅನಂತ ಕುಮಾರ ಹೆಗಡೆಯವರು ಸಂಸದರದರು. 1998ರಲ್ಲೂ ಲೋಕಸಭೆಗೆ ಆಯ್ಕೆಯಾದ ಇವರನ್ನು ಸೋಲಿಸಿದ್ದು ಮಾರ್ಗರೇಟ್ ಆಳ್ವಾರವರು 1999ರಲ್ಲಿ. ಕೊನೆಯ ಚುನಾವಣೆಯಲ್ಲಿ ಅಂದರೆ 2004ರಲ್ಲಿ ಗೆದ್ದವರು ಅನಂತ ಕುಮಾರ ಹೆಗಡೆಯವರು. ಹೀಗೆ ಇತ್ತೀಚಿನ ವರ್ಷಗಲಲ್ಲಿ ಅವರು-ಇವರು ಎಂದು ಅಧಿಕಾರ ಪಲ್ಲಟ ಮಾತ್ರ ನಡೆಯುತ್ತಿದೆಯೇ ಹೊರತು ಪರಿಸರವನ್ನು ಗಮನದಲ್ಲಿಟ್ಟುಕೊಂಡು ಆಗುತ್ತಿರು ಅಭಿವೃದ್ಧಿ ಅಷ್ಟಕಷ್ಟೆ.

ಕರುನಾಡಿಗೆ
ವಿದ್ಯುತ್ ನೀಡುತ್ತಿರುವ್ ಜೋಯಿಡಾ ದಿನದಿಂದ ದಿನಕ್ಕೆ ಅಲಕ್ಷಕ್ಕೆ ಒಳಗಾಗುತ್ತಿದೆ.ರಾಷ್ಟ್ರೀಯ ಹೆದ್ದಾರಿಗಳು ಊರು ಕೇರಿಗಳ ಓಣಿಯ ಸ್ಥಿತಿಯನ್ನು ತಲುಪುತ್ತಿವೆ. ಸರ್ಕಾರಿ ಅಧಿಕಾರಿಗಳು ಹೆಚ್ಚು ಹೆಚ್ಚು ಲಂಚಕೋರರಾಗುತ್ತಿದ್ದಾರೆ. ಕಾಡು ಜಿಲ್ಲೆ ಎಂಬ ಅನ್ವರ್ಥಕವಿದ್ದರೂ, "ತಮ್ಮನ್ನು ರಕ್ಷಿಸಿ" ಎಂಬ ಅರಣ್ಯದೇ ಕೂಗೇ ಅರಣ್ಯ ರೋದನವಾಗಿರುವುದು ಜಿಲ್ಲೆಯ ಅತ್ಯಂತ ವಿಪರ್ಯಾಸದ ಸಂಗತಿಯಾಗಿದೆ. ಹಿಂದೆ ಸ್ವಾತಂತ್ರದ ಕಾಲದಲ್ಲಿ ಜನರಲ್ಲಿದ್ದ ಒಗ್ಗಟ್ಟೆಂಬ ಗೋಡೆಯ ಇಟ್ಟಿಗೆಗಳ ಮಧ್ಯೆ 'ಪಕ್ಷ' ಎಂಬ ಮಹಾ ಬಿರುಕು ಎದ್ದಿದೆ. ಜಿಲ್ಲೆಯ ಪ್ರತೀ ಐದಕ್ಕೊಬ್ಬ ಯಾವುದಾದರೂ ಯೋಜನೆಯ ಕರಾಳ ನೆರಳಿನಡಿಯಿದ್ದು, ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ.ಅಲ್ಲದೇ ಕೆನರಾ ಕ್ಷೇತ್ರದಡಿಯಲ್ಲಿ ಬೆಳಗಾವಿ ಜಿಲ್ಲೆಯ ಖಾನಪುರ ಮತ್ತು ಕಿತ್ತೂರು ಕ್ಷೇತ್ರಗಳು ಬರುತ್ತವೆ. ಅಲ್ಲಿನ ಜನ ಜೀವನವೂ ಇನ್ನೂ ಸುಧಾರಣೆಯಾಗಬೇಕಿದೆ.ಆರೋಗ್ಯಕ್ಕೆ ಸಂಬಂಧಪಟ್ಟ ಸೌಕರ್ಯಗಳಲ್ಲಿ ನಮ್ಮ ಜಿಲ್ಲೆ ಕರ್ನಾಟಕದ ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿ ಪರಿಗಣಿಸಲ್ಪಡುತ್ತದೆ. ಸಮಸ್ಯೆಗಳು ಇವೆ ಎಂದ ಮಾತ್ರಕ್ಕೆ ಅಭಿವೃದ್ಧಿಯೇ ಆಗಿಲ್ಲ ಎಂದಲ್ಲ. ಆದರೆ ನಮ್ಮ ಸಂಸದರು ಮನಸ್ಸು ಮಾಡಿದರೆ ಜನರ ಸ್ಥಿತಿಗತಿಯನ್ನು ಇನ್ನೂ ಉತ್ತಮ ಪಡಿಸಬಹುದು.2005 ಕರ್ನಾಟಕ ಸರ್ಕಾರದ ಮಾನವ ಸಂಪನ್ಮೂಲ ವರದಿಯ ಪ್ರಕಾರ ಆಗಿದ್ದ 27 ಜಿಲ್ಲೆಗಳ ಪೈಕಿ ವಿವಿಧ ಕ್ಷೇತ್ರಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸ್ಥಾನ ಇಂತಿದೆ.
ಶಿಕ್ಷಣ -5
ಆರೋಗ್ಯ-22
ಆದಾಯ-11
ನಾವು ಹಾಗೂ ಹಲವಾರು ಭರವಸೆಗಳನ್ನು ನೀಡಿ ಲೋಕಸಭೆಗೆ ಹೋಗಿ ಕೂರುವವರು ಪ್ರಯತ್ನಿಸಿದರೆ ನಮ್ಮ ನೆಲವನ್ನು ಇನ್ನೂ ಅಭಿವೃದ್ಧಿಪಡಿಸಬಹುದಾಗಿದೆ.ಅಂದ ಹಾಗೆ ಈ ಬಾರಿ ಮೊದಲ ಬಾರಿ ಮತ ಚಲಾಯಿಸಲು ಮನೆಗೆ ಹೋಗುತ್ತಿದ್ದೇನೆ. ಹಿಂದಿನ ವಿಧಾನಸಭಾ ಉಪಚುನಾವಣೆಯ ಸಮಯದಲ್ಲಿ ನಮ್ಮ ಪರೀಕ್ಷೆಗಳು ನಡೆಯುತ್ತಿದ್ದರಿಂದ ಚೊಚ್ಚಲ ಮತ ಚಲಾವಣೆಯ ಅವಕಾಶವಿದ್ದರೂ ಅದು ಕೈಗೂಡಿರಲಿಲ್ಲ.