Thursday, June 18, 2009

ಹಿಚ್ಕಡ ಕುರ್ವೆ

ಅಂಕೋಲೆಯ ಕಡೆ ಮಳೆ ಜೋರಾಗಿ ನಾಲ್ಕಾರು ದಿನ ಬಿತ್ತೆಂದರೆ ಪ್ರಚಾರಕ್ಕೆ ಬರುವ ಸ್ಥಳವೆಂದರೆ ಕುರ್ವೆ, ಒಂದು ಚಿಕ್ಕ ದ್ವೀಪ. ಅಂಕೋಲೆಯ ಗಂಗೆ ಗಂಗಾವಳಿ(ಗೆಳೆಯ ತೇಜುವಿನ ಹೊಸ ನಾಮಕರಣ 'ನಮ್ ಗಂಗು') ನದಿ ಧಾರವಾಡದ ಹತ್ತಿರ ಆಗಮಿಸಿ ಅಂಕೋಲಾ ಮತ್ತು ಕುಮಟಾ ತಾಲೂಕಿನ ಸರಹದ್ದಿನಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ನದಿಯ ಮುಖಜಭೂಮಿಯಿಂದ 4 ಕಿ.ಮೀ. ಹಿಂದೆ ವಜ್ರಾಕಾರದ ಈ ಪುಟ್ಟ ದ್ವೀಪವಿದೆ. ನದಿ ಮಧ್ಯದಲ್ಲಿರುವ ಇಂತಹ ಚಿಕ್ಕ ದ್ವೀಪಗಳಿಗೆ ಸಾಮಾನ್ಯವಾಗಿ 'ಕುರ್ವೆ' ಎನ್ನುತ್ತಾರೆ. ಉತ್ತರ ಕನ್ನಡದಲ್ಲಿ ಅಘನಾಶಿನಿ ನದಿಯ ಐಗಳ ಕುರ್ವೆ, ಶರಾವತಿ ನದಿಯ ಮಾವಿನಕುರ್ವೆ ಹೀಗೆ ನಾಲ್ಕಾರು ಪ್ರಸಿದ್ದವಾದ ಕುರ್ವೆಗಳಿವೆ. ಸಾಮಾನ್ಯವಾಗಿ ಸಮೀಪದಲ್ಲಿರೋ ಊರ ಹೆಸರಿನಿಂದಲೋ ಅಥವಾ ಅಲ್ಲಿ ವಾಸಿಸುವ ಜನಾಂಗದ ಹೆಸರಿನಿಂದಲೇ ಆ ಕುರ್ವೆಯನ್ನು ಕರೆಯಲಾಗುತ್ತದೆ. ನಮ್ಮ ಈ ಕುರ್ವೆಯ ಸಮೀಪದಲ್ಲಿ ಹಿಚ್ಕಡ ಎಂಬ ಊರು ಇರುವುದರಿಂದ ಇದನ್ನು 'ಹಿಚ್ಕಡ ಕುರ್ವೆ' ಎಂದು ಕರೆಯುತ್ತಾರೆ.





ಸುಮಾರು 44 ಎಕರೆ ವಿಸ್ತೀರ್ಣದ ಈ ನಡುಗಡ್ಡೆಯ ತುಂಬ ತೆಂಗಿನಮರಗಳು ಇವೆಯೆಂದು ಕೇಳಿದ್ದೆ. ಮೊನ್ನೆ ಮೇ ತಿಂಗಳ ಕೊನೆಯಲ್ಲಿ ಮನೆಗೆ ಹೋದಾಗ ಅಲ್ಲಿಗೆ ಹೋಗಿಬಂದಾಯಿತು.. ಈ ಹಿಂದೆ ಚಿಕ್ಕವನಿರುವಾಗ ಕಾಳಿನದಿಯಲ್ಲಿ ಮರದ ದೋಣಿಯಲ್ಲಿ ಹೋಗಿದ್ದನ್ನು ಬಿಟ್ಟರೆ ಇನ್ನೆಲ್ಲ ಕಡೆ ನದಿ ದಾಟುವಾಗ ಯಾಂತ್ರೀಕೃತ ಬಾರ್ಜಲ್ಲೇ ಹೋಗಿದ್ದು.. ಆದ್ದರಿಂದ ಸುಮಾರು ಒಂದು ದಶಕದ ನಂತರ ಪುನ: ಮರದ ಚಿಕ್ಕ ದೋಣಿಯಲ್ಲು ಹೋಗುವ ಅವಕಾಶ ಸಿಕ್ಕಿತ್ತು..ಕಾಳಿನದಿಯ ಆ ದೋಣಿಗಳಾದರೂ ಸುಮಾರು 12 ರಿಂದ 16 ಜನರನ್ನು ಕೊಂಡೊಯ್ಯುವ ಸಾಮರ್ಥ್ಯವುಳ್ಳವಾದ್ದರಿಂದ ಆ ದೋಣಿಗಳ ಮೇಲೆ ಹೋಗಲು ಅಷ್ಟೊಂದು ಭಯವಾಗುತ್ತಿರಲಿಲ್ಲ. ಆದರೆ ಈ ಪುಟ್ಟ ದೋಣಿಯ ಮೇಲೆ ಹೆದರುತ್ತಲೇ ನಾನು ಮತ್ತು ತೇಜು ಕುರ್ವೆ ಕಾಲಿಟ್ಟಾಯಿತು.. ನದಿ ಮಧ್ಯದಲ್ಲಿ ಸಾಗುವಾಗ ದೂರದಲ್ಲಿನ ಗಂಗಾವಳಿ ರೈಲ್ವೆ ಬ್ರಿದ್ಜು , ನದಿ ಇನ್ನೊಂದು ತೀರದಲ್ಲಿರುವ ಇನ್ನು ಕೆಲ ಹಳ್ಳಿಗಳು ಕಣ್ಣಿಗೆ ಮುದ ನೀಡುತ್ತಿದ್ದವು. ಕೆಲ ನಿಮಿಷಗಳಲ್ಲೇ ಕುರ್ವೆ ದಡ ತಲುಪಿದರೂ ಸಹ ಪುನಃ ಮನೆಗೆ ಹೋಗುವಾಗ ಆ ಪುಟ್ಟ ದೋಣಿಯ ಮೇಲೆ ಹೋಗಬೇಕೆಂಬ ಭಯ ನನಗೆ..

ತೆಂಗಿನ ತೋಟಗಳಿಂದಲೇ ತುಂಬಿದ ಕುರ್ವೆಯಲ್ಲಿ ಸುಮಾರು ಇಪ್ಪತ್ತೈದು ಕುಟುಂಬಗಳಿದ್ದು ಒಂದು ಶಾಲೆ ಇದೆ. ವಿದ್ಯುತ್ತಿನ ಸಂಪರ್ಕ ಕೂಡ ಇದೆ. ತೋಟಗಾರಿಕೆ ಮತ್ತು ಮೀನುಗಾರಿಕೆಯ ಮೇಲೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಅಲ್ಲಲ್ಲಿ 'ಪಾರ್ಕಿಂಗ್' ಮಾಡಿದ ದೋಣಿಗಳೂ ಕೂಡ ಕಣ್ಣಿಗೆ ಬೀಳುತ್ತಿದ್ದು ಕೆಲವೆಡೆ 'ಕಲ್ಗ' ಎನ್ನೋ ವಿಶೇಷವಾದ ಜೀವಿಗಳಿರೋ ಕಲ್ಲುಗಳು (ಊರ ಕಡೆ ಈ ಕಲ್ಲುಗಳನ್ನು ಕಲ್ಗನ ಮುಯ್ಡು ಎನ್ನುತ್ತಾರೆ) ಕಾಣಸಿಗುತ್ತಿದ್ದವು. ಕೆಲ ತೆಂಗಿನಮರಗಳು ದಂಡೆಯಿಂದ ನಭದೆಡೆಗೆ ನೆಗೆಯುತ್ತಿದ್ದಂತೆ ಭಾಸವಾಗುತ್ತಿದ್ದರೆ ಇನ್ನು ಕೆಲವು ನದಿ ನೀರನ್ನು ಚುಂಬಿಸಲು ಹವಣಿಸುತ್ತಿದ್ದಂತೆ ಅನಿಸುತ್ತಿತ್ತು.





ಇನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಈ ದ್ವೀಪವನ್ನು ಚಳುವಳಿಗಾರರು ಭೂಗತವಾಗುವುದಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಈ ನಡುಗಡ್ಡೆಯಲ್ಲಿರುವಾಗ ಗಂಗಾವಳಿ ನಮ್ಮನ್ನು ಸುತ್ತುವರೆದಿದ್ದರಿಂದ "ನಾ ಖೈದಿ ನೀನೆ ಸೆರೆಮನೆ" ಎಂಬ ಮುಂಗಾರುಮಳೆಯ ಲೈನ್ ನೆನಪಿಗೆ ಬರುತಿತ್ತು. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಈ ಸ್ಥಳದ ಬಗ್ಗೆ ಪ್ರೊ.ಜಿ.ಎಚ್.ನಾಯಕರು "ಪ್ರಕೃತಿಯೇ ಸೌಂದರ್ಯದ ಚಿತ್ರ ಬಿಡಿಸಿದಂತೆ ಇದೆ ಸುತ್ತಮುತ್ತಲಿನ ವಾತಾವರಣ" ಎಂದು ಒಂದೆಡೆ ಬರೆದಿದ್ದಾರೆ. ಆದರೆ ಇಲ್ಲಿನ ಜನರು ತೊಂದರೆಗೊಳಗಾಗುವುದು ಮಳೆಗಾಲದಲ್ಲಿ. ಭಾರೀ ಮಳೆ ಸುರಿಯಿತೆಂದರೆ ಸಾಕು ನಮ್ ಗಂಗುವಿನ ನೀರಿನ ಮಟ್ಟವೇರಿ ಈ ದ್ವೀಪ ಮುಳುಗಲು ಪ್ರಾರಂಭವಾಗುತ್ತದೆ. ಆಗ ಇಲ್ಲಿನ ಜನರಿಗೆ ಆಶ್ರಯ ನೀಡುವ ಸ್ಥಳಗಳೆಂದರೆ ಎಡ ದಂಡೆಯ ಮೇಲಿರುವ ಹಿಚ್ಕಡ ಊರಿನ ಗಂಜಿಕೇಂದ್ರ ಹಾಗೂ ಬಲ ದಂಡೆಯ ಮೇಲಿರುವ ಅಗ್ಗರಗೋಣ ಅಥವಾ ಸಗಡಗೇರಿ ಶಾಲೆಯಲ್ಲಿ ಶುರುಮಾಡುವ ಗಂಜೀಕೇಂದ್ರಗಳು..ಇನ್ನೊಮ್ಮೆ ಮಳೆಗಾಲ ಪ್ರಾರಂಭವಾಗಿದೆ. ನಮ್ ಗಂಗು ಎನಾದರೂ ಮೈತುಂಬ ಹರಿದರೆ ಮತ್ತೆ ಇಲ್ಲಿನ ಜನರಿಗೆ ಕಷ್ಟ ತಪ್ಪಿದ್ದಲ್ಲ. ಕಳೆದ ಬಾರಿಯೂ ಕುರ್ವೆಯನ್ನು ಮುಳುಗಿಸಿ ಮಂತ್ರಿಗಳೇ ಆಶ್ರಯ ತಾಣಗಳಿಗೆ ಬರುವಂತೆ ಮಾಡಿದ್ದ ನಮ್ ಗಂಗು ಈ ಬಾರಿಯಾದರೂ ಇಲ್ಲಿನ ಜನರ ಮೇಲೆ ಕೃಪೆ ತೋರುವಳೇ ಎಂದು ನೋಡಬೇಕಾಗಿದೆ.

Tuesday, June 2, 2009

ಅಂಕೋಲೆಯ ಕಡಲತೀರಗಳು

"It may be a fraction.. but still it counts" ಎನ್ನುತ್ತಲೇ ಸ್ವಲ್ಪ ಅಂಕಿ-ಅಂಶಗಳನ್ನು ಹೇಳಿ ಮುಂದೆ ಹೋಗುವೆ. ನಮ್ಮ ದೇಶವು 7516 ಕಿ.ಮೀ.ಗಳಷ್ಟು ಉದ್ದದ ಕಡಲತೀರವನ್ನು ಹೊಂದಿದೆ. ಅದರಲ್ಲಿ ಕರ್ನಾಟಕದ ಪಾಲು 320 ಕಿ.ಮೀ.ಗಳು. ಕರ್ನಾಟಕ ಕರಾವಳಿ ಪ್ರದೇಶವು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಂಚಿಹೋಗಿದೆ. ಉತ್ತರ ಕನ್ನಡದ ಕರಾವಳಿ ಪ್ರದೇಶ 140 ಕಿ.ಮೀ.ಗಳು. ಉತ್ತರ ಕನ್ನಡದ ಒಟ್ಟು 11 ತಾಲೂಕುಗಳಲ್ಲಿ 5 ತಾಲೂಕುಗಳು ಕರಾವಳಿ ತಾಲೂಕುಗಳು. ಅವುಗಳೆಂದರೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ. ನಮ್ಮ ಅಂಕೋಲೆಯ ಕರಾವಳಿ ತೀರ ಸುಮಾರು 18.5 ಕಿ.ಮೀ. ಗಳು. ಅಂದ್ರೆ 0.24 ಶೇಕಡಾ :) ಹಾರವಾಡ, ಬೇಲೇಕೇರಿ, ಬಾವಿಕೇರಿ, ಕೇಣಿ, ಅಂಕೋಲ ಪಟ್ಟಣ, ತೆಂಕಣಕೇರಿ, ನದಿಬಾಗ, ಬೆಳಂಬಾರ, ವಾಡಿಬೊಗ್ರಿ, ಹೊನ್ನೆಬೈಲ್, ಮಂಜಗುಣಿ ಊರುಗಳು ಅಂಕೋಲಾ ತಾಲೂಕಿನ ತೀರ ಪ್ರದೇಶವನ್ನು ಹಂಚಿಕೊಂಡಿವೆ. ಅಂಕೋಲೆಯ ಕಡಲ ತೀರ ಪ್ರದೇಶವು ಅನೇಕ ಮಹತ್ವ ಸ್ಥಳಗಳನ್ನು ಹೊಂದಿದೆ.

ಬ್ರಿಟಿಷರ ಕಾಲದಿಂದಲೂ ಉತ್ತಮ ಬಂದರಾಗಿರುವ ಬೇಲೇಕೇರಿಯು ಇಂದು ಕರ್ನಾಟಕದ ೧೦ ಮುಖ್ಯ ಬಂದರುಗಳಲ್ಲಿ ಒಂದು. ಅಲ್ಲದೇ ಉತ್ತಮ ಕಡಲ ಕಿನಾರೆಯನ್ನು ಹೊಂದಿರುವ ಈ ತೀರಕ್ಕೆ “Beach which has a potential of International Tourism” (ಅಂತರಾಷ್ಟ್ರೀಯ ಪ್ರವಾಸಯೋಗ್ಯ ಸಮುದ್ರತೀರ) ಎಂದು ಮಾನ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿರುವ “ಅ” ಶ್ರೇಣಿಯ ಕೇವಲ ೫ ಸಮುದ್ರದಂಡೆಗಳಲ್ಲಿ ಬೇಲೇಕೇರಿಯೂ ಒಂದು. ಇದು ಕೇವಲ ಉತ್ತಮ ಬಂದರು ಮಾತ್ರವಲ್ಲದೇ ಉತ್ತಮ ಪ್ರವಾಸೀತಾಣವೂ ಆಗಿದ್ದು ಇಲ್ಲಿನ ಸೂರ್ಯಾಸ್ತ ನಯನಮನೋಹರ.




ಬೇಲೇಕೇರಿ

ಹೊನ್ನೆಬೈಲ್ ನ ಸಮುದ್ರದಂಡೆ ಸಹ ಇತ್ತೀಚೆಗೆ “ಹೊನ್ನೆ ಬೀಚ್” ಎಂಬ ಹೆಸರಿನಿಂದ ಪ್ರಸಿದ್ಧವಾಗುತ್ತಿದೆ. ಇತ್ತೀಚೆಗೆ ರೆಸಾರ್ಟ್ ವ್ಯವಸ್ಥೆಯನ್ನು ಕೂಡ ಇಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಅಂಕೋಲಾ ಪಟ್ಟಣದಿಂದ ಸುಮಾರು 2-3 ಕಿ.ಮೀ.ದೂರದಲ್ಲಿರುವ ನದಿಭಾಗದ ಕಡಲತೀರವೂ ಸಹ ತನ್ನ ಹಾಲ್ನೊರೆಯ ಅಲೆಗಳಿಂದ ಮನಮೋಹಕವಾಗಿದೆ. ಪಕ್ಕದಲ್ಲೇ ಬಸಕಲ್ಲು ಗುಡ್ಡವಿದ್ದು ಅದರ ತುದಿಯಿಂದ ಸಮುದ್ರವನ್ನು ನೋಡಬಹುದು. ಮಳೆಗಾಲದ ಸಮಯದಲ್ಲಿ ಹೆಚ್ಚಿನ ನೀರು ಹೊರಬಂದು "ಕೋಡಿ" ಉಂಟಾಗಿ ಒಂದು ಚಿಕ್ಕ ಹಳ್ಳವನ್ನೇ ನಿರ್ಮಿಸುತ್ತದೆ. ಇದನ್ನು ಗೆಝೆಟಿಯರಗಳಲ್ಲೆಲ್ಲ ಅಂಕೋಲಾ 'ನದಿ'ಯೆಂದು ಕರೆದರೂ ಸಹ ನದಿ ಎಂಬ ಸ್ಥಾನಮಾನ ಸ್ವಲ್ಪ ಹೆಚ್ಚೇ ಆಯಿತೇನೋ ಎಂಬ ಭಾವನೆ ನನ್ನದು. ವಾತದ ಔಷಧಿಗೆ ಹೆಸರುವಾಸಿಯಾಗಿರುವ ಬೆಳಂಬಾರ ಸಹ ಕಡಲತೀರದಲ್ಲಿರುವ ಊರು.ಮೀನುಗಾರಿಕೆಗೆ ಹೆಸರಾದ ಊರು. ಆದರೆ ನಿರಂತರ ಕಡಲ್ಗೊರೆತದ ಕಾರಣ ಪ್ರವಾಸೋದ್ಯಮದ ದೃಷ್ಟಿಯಿಂದ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿರುವುದಿಲ್ಲ.


ಹೊನ್ನೆ ಬೀಚ್


ಬೆಳಂಬಾರ

"Coastal Ecosystems of the Karnataka State, India" ಪುಸ್ತಕದಲ್ಲಿ ಕರ್ನಾಟಕದ ಎಲ್ಲ ಕಡಲತೀರಗಳ ಜೈವಿಕ ವ್ಯವಸ್ಥೆಯ ಬಗ್ಗೆ ಮಾಹಿತಿಯಿದ್ದು ಎಲ್ಲ ಕಡಲತೀರಗಳನ್ನು ಅವುಗಳ ಗುಣಧರ್ಮಗಳ ಆಧಾರದ ಮೇಲೆ ರೇಟಿಂಗ್ ಮಾಡಲಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅಂಕೋಲೆಯ ಕಡಲತೀರಗಳ ರೇಟಿಂಗ್ ಇಂತಿದೆ.

ಮಂಜುಗುಣಿ ( ಗಂಗಾವಳಿ ನದಿಯ ಮುಖಜಭೂಮಿ ಇರುವ ಪ್ರದೇಶ) ........B
ಹೊನ್ನೆಬೈಲು..............C
ಬೆಳಂಬಾರ..............E
ನದಿಬಾಗ್.........E (ಪ್ರಾಕೃತಿಕವಾಗಿ ಸುಂದರ ತೀರವಾದರೂ ಕಡಲ್ಗೊರೆತಕ್ಕೆ ತುತ್ತಾಗುತ್ತಿದೆ)
ಬೊಬ್ರುವಾಡ...........E
ಬಾವಿಕೇರಿ.............B
ಬೇಲೇಕೇರಿ................A
ಹಾರವಾಡ.............B

ನದಿಬಾಗ

ದೂರದ ಧಾರವಾಡದಿಂದ ಅಂಕೋಲೆಯನ್ನು ಅರಸುತ್ತ ಇಲ್ಲಿಗೆ ಹರಿದು ಬಂದ ಗಂಗಾವಳಿ ನದಿಯು ಸಮುದ್ರ ಸೇರುವುದು ಅಂಕೋಲಾ ಮತ್ತು ಕುಮಟಾ ತಾಲೂಕುಗಳ ಕಡಲತೀರದ ಸರಹದ್ದಿನಲ್ಲಿ.ಅಷ್ಟೇನೂ ವಿಶಾಲವಲ್ಲದ ಮುಖಜಭೂಮಿ ಕೂಡ ನಿರ್ಮಾಣವಾಗಿದೆ. ಮೀನುಗಾರಿಕೆಗೆ ವಿಪುಲ ಅವಕಾಶವಿದ್ದು ಅನೇಕ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿದೆ. ಅಲ್ಲದೇ ಕೆಲವು ಊರುಗಳಲ್ಲಿ ಸಮುದ್ರದ ನೀರಿನಿಂದ ಉಪ್ಪನ್ನು ಕೂಡ ತಯಾರಿಸಲಾಗುತ್ತದೆ.



ನಾನೂ ಮೊದಲು ಇದು ಮರಳಿನ ರಾಶಿಯೆಂದೇ ತಿಳಿದಿದ್ದೆ!!

ಅಂಕೋಲೆಯ ಉಪ್ಪಿನ ತಯಾರಿಕೆಗೆ ಸುಮಾರು ಇನ್ನೂರರಿಂದ ಮುನ್ನೂರು ವರ್ಷಗಳ ಇತಿಹಾಸವಿದ್ದು ಅನೇಕ ಕುಟುಂಬಗಳಿಗೆ ಆಸರೆಯಾಗಿ ನಿಂತಿದೆ. ಅಲ್ಲದೇ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ 'ಕರ್ನಾಟಕದ ಬಾರ್ಡೋಲಿ' ಎಂದೆನಿಕೊಂಡ ಅಂಕೋಲೆ ಕರಾವಳಿ ತೀರದಲ್ಲಿಲ್ಲದಿದ್ದರೆ ಈ ಹೆಸರು ಬರುತ್ತಿರಲಿಲ್ಲವೋ ಎನೋ... ಏಕೆಂದರೆ ಅಂಕೋಲೆಯಲ್ಲಿ ಚಳುವಳಿ ಪ್ರಾರಂಭವಾದದ್ದೇ ಉಪ್ಪಿನ ಸತ್ಯಾಗ್ರಹದ ಮೂಲಕ!!

ಹೀಗೆ ಕರಾವಳಿ ಸಂಪತ್ತನ್ನು ಹೊಂದಿರುವ ಅಂಕೋಲೆಯಲ್ಲಿ ಅದು ಸಂಪೂರ್ಣವಾಗಿ ವಿನಿಯೋಗವಾಗುತ್ತಿಲ್ಲ. ಪರಿಸರಕ್ಕೆ, ಜನರಿಗೆ ಹೆಚ್ಚು ಹಾನಿಯಾಗದಂತೆ ಆಧುನೀಕತೆ ತರುವುದು ಕಷ್ಟವಾದರೂ ಸಹ ಅಸಾಧ್ಯವೇನಲ್ಲ. ಅಲ್ಲದೇ ಕೆಲ ಕಡಲತೀರಗಳು ಕಡಲ್ಗೊರೆತಕ್ಕೆ ತುತ್ತಾಗಿರುವುದರಿಂದ ಆ ತೀರಗಳಿಗೂ ಇಂದು ರಕ್ಷಣೆ ಬೇಕಿದೆ.