Saturday, March 7, 2009

ಮಿರ್ಜಾನ ಕೋಟೆ

ನಾನು ಚಿಕ್ಕಂದಿನಿಂದಲೂ 'ಮಿರ್ಜಾನ ಕೋಟೆ' ಬಗ್ಗೆ ಕೇಳುತ್ತಾ ಬಂದಿದ್ದರೂ, ನಮ್ಮ ಊರಿನಿಂದ ಸುಮಾರು ಇಪ್ಪತೈದು ಕಿ.ಮೀ.ದೂರದಲ್ಲಿದ್ದ ಈ ಕೋಟೆಯನ್ನು ನೋಡಲು ಕಾಲ ಕೂಡಿ ಬಂದಿರಲಿಲ್ಲ. ಆದರೆ ನಮ್ಮ ಅಂಕೋಲೆಯ ಟ್ರೇನಿಂಗ್ ಕಾಲೇಜಿನ ಹಿಂದಿರುವ ಕೋಟೆಯಿಂದ ಮಿರ್ಜಾನ್ ಕೋಟೆಗೆ ಸುರಂಗವಿದೆ ಎಂಬ ಮಾತುಗಳನ್ನೆಲ್ಲ ಕೇಳಿದ್ದೆ. ಕಳೆದ ದೀಪಾವಳಿ ಸಮಯದಲ್ಲಿ ಈ ಕೋಟೆಯನ್ನು ಕಾಣುವ ಕಾಲ ಕೂಡಿ ಬಂತು.ಕೋಟೆಯ ಐತಿಹ್ಯದ ಬಗ್ಗೆ ತಿಳಿದ ಲೋಕಲ್ ಗೈಡು ಲೋಕೇಶ , ನಾನು ಮತ್ತು ಪವನ್ ಮೂರು ಜನ ನಮ್ಮ ಸ್ಲ್ಪೆಂಡರ್ ನಲ್ಲೆ ಮಿರ್ಜಾನಿನ ಕೋಟೆಯನ್ನು ಗೆಲ್ಲಲು ಹೊರಟೆದ್ದೇವೆ ಎಂಬ ಪೋಸು ನೀಡುತ್ತ ಟ್ರಿಪಲ್ ರೈಡ್ ಮಾಡುತ್ತ ಕೋಟೆಯೆಡೆಗೆ ಹೊರಟೆವು.ರಾಜೇಶ್ ನಾಯ್ಕರೂ ಸಹ ಮಿರ್ಜಾನಿನ ಕೋಟೆಯ ಬಗ್ಗೆ ಹಿಂದೆಯೆ ಪೋಸ್ಟ್ ಮಾಡಿದ್ದು, ಅದನ್ನು ಓದಿದ್ದೂ ಸಹ ನಾನು ಈ ಕೋಟೆಯನ್ನು ನೋಡಲು ಇನ್ನೊಂದು ಕಾರಣವಾಗಿತ್ತು.

ಅಂಕೋಲೆಯಿಂದ ಕುಮಟೆಗೆ ಹೋಗುವಾಗ ಅಂಕೋಲೆಯಿಂದ ಸುಮಾರು 25 ಕಿ.ಮೀ. ದೂರದಲ್ಲಿ ಮಿರ್ಜಾನ ಸಿಗುತ್ತದೆ. ಮಿರ್ಜಾನಿನ ಆಟದ ಬಯಲಿನ ವಿರುದ್ಧ ಬದಿಯಲ್ಲಿ ಸಿಗುವ ತಿರುವಲ್ಲಿ ಸಾಗಿದಾಗ ಕೆಲವೇ ಸೆಕೆಂಡುಗಳಲ್ಲಿ ನಮಗೆ ಮಿರ್ಜಾನಿನ ಕೋಟೆ ಕಾಣಸಿಗುತ್ತದೆ.




ಸುಮಾರು 8 ರಿಂದ 9 ಎಕರೆಯ ಜಾಗದಲ್ಲಿ ಹರಡಿರುವ ಈ ಕೋಟೆಯು ಭಾರತೀಯ ಪುರಾತತ್ವ ಇಲಾಖೆಯ ನಿವೇಶನ(Archieological Site)ಗಳಲ್ಲೊಂದು. ಇದರ ಬಗ್ಗೆ ರಾಜೇಶ್ ನಾಯ್ಕ್ ರು ಮಿರ್ಜಾನ ಕೋಟೆಯ ಕುರಿತು ಮಾಡಿದ ಪೋಸ್ಟ್ ನಲ್ಲಿ ಮಾಹಿತಿಯಿದೆ.
ನಾನೆಂದು ಈ ಹಿಂದೆ ಮಿರ್ಜಾನಿನಂತಹ ದೊಡ್ಡ ಕೋಟೆಯನ್ನು ನೋಡಿರಲಿಲ್ಲ. ದಾರಿಯಲ್ಲಿರುವ ಚಿಕ್ಕ ತಿರುವು ಕೊನೆಗೊಂಡನೆಯೆ ಈ ಬೃಹತ್ ಕೋಟೆ ನನ್ನ ಕಣ್ಮುಂದಿತ್ತು. ಒಮ್ಮೆಲೆ ದಿಗ್ಭ್ರಾಂತನಾದ ನಾನು ಬೈಕ್ ನ್ನು ಬೇಗನೆ ಒಂದೆಡೆ ನಿಲ್ಲಿಸಿ ಕೊಟೆಯ ಒಳಹೋಗಲು ತುದಿಕಾಲಲ್ಲಿ ನಿಂತೆನು. ಲೋಕೇಶ ಕೋಟೆಗೆ ಹೋಗಲು ಮಹಾದ್ವಾರವಿದೆ. ಆದರೆ ನಾವು ಗುಪ್ತದ್ವಾರದಿಂದ ಹೋಗೋಣ ಎಂದು ಒಂದು ಚಿಕ್ಕ ಕಿಂಡಿಯನ್ನು ನಮಗೆ ತೋರಿಸಿದ. ಹಾಗೋ ಹೀಗೋ ಆ ಕಿಂಡಿಯ ಮೂಲಕ ನಾವು ಮಿರ್ಜಾನ್ ಕೋಟೆಯನ್ನು ಪ್ರವೇಶಿಸಿದೆವು. ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಸಮತಟ್ಟಾದ ಸ್ಥಳಕ್ಕೆ ಬಂದೆವು.








ಈ ಕೋಟೆಯ ಕಲ್ಲುಗಳು ಕೆಲವೆಡೆ ಬಿದ್ದು ಹೋಗಿದ್ದು ಅಂಥ ಸ್ಥಳಗಳಲ್ಲಿ ಪುನಃ ಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಆ ಕಲ್ಲುಗಳನ್ನು ದಾಟಿ ಕೋಟೆಯ ಮಧ್ಯಸ್ಥಳಕ್ಕೆ ಬಂದೆವು. ಈ ಕೋಟೆಯು ಮೂರು ಮುಖ್ಯ ಬಾವಿಗಳನ್ನು ಹೊಂದಿದ್ದು 2 ಬಾವಿಗಳು ಕೋಟೆಯ ಮಧ್ಯಭಾಗದಲ್ಲಿವೆ. ಇನ್ನೊಂದು ಬಾವಿ ಕೋಟೆಯ ಹಿಂದಿನ ಭಾಗದಲ್ಲಿದೆ. ಈ ಎರಡು ಬಾವಿಗಳು ತುಂಬಾ ಆಳವಾಗಿದ್ದು ಬಾವಿಯ ಗುಂಟ ಹೇರಳವಾಗಿ ಸಸ್ಯಗಳು ಬೆಳೆದುಕೊಂಡಿವೆ. ಬಾವಿಯನ್ನು ಮೇಲಿನಿಂದಲೇ ನೋಡಬಹುದು ಇಲ್ಲವೇ ಬಾವಿಯ ನೀರಿನ ಮಟ್ಟಕ್ಕೆ ತಲುಪುವಂತೆ ಮೆಟ್ಟಿಲುಗಳಿವೆ. ಲೋಕೇಶ ಈ ಬಾವಿಗಳಲ್ಲಿ ಅನೇಕ ಚಿತ್ರಗಳ ಚಿತ್ರೀಕರಣ ಆದುದನ್ನು ನೆನೆಪಿಸಿಕೊಳ್ಳುತ್ತಿದ್ದ. ರಮೇಶ ಅರವಿಂದ್ ನಟಿಸಿದ "ಸಂಭ್ರಮ" ಚಿತ್ರದ 'ಯಾರು ಭೂಮಿಗೆ' ಹಾಡು, ಪಾರ್ಥ ಚಿತ್ರದ ಕೆಲವು ಹಾಡುಗಳು ಹಾಗೂ ಸದ್ಯ ಬಂದ "ಜಾಲ್ ಡೇಸ್" ಚಿತ್ರದ ಹಾಡುಗಳಲ್ಲದೇ ಇನ್ನೂ ಅನೇಕ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ. "ಮಾತಾಡ್ ಮಾತಾಡ್ ಮಲ್ಲಿಗೆ " ಚಿತ್ರದಲ್ಲೂ ಈ ಕೋಟೆ ಕಾಣಿಸಿಕೊಂಡಿದೆ.

ನಾಗದೇವರ ಕಲ್ಲುಗಳು, ಕುದುರೆ ಕಂಬ ಮತು ಧ್ವಜಸ್ಥಂಬ
ಕೋಟೆಯ ಮಧ್ಯಭಾಗದ ಸಮೀಪದಲ್ಲಿ ಒಂದು ಮರದಡಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಾಗದೇವರ ಕಲ್ಲುಗಳಿದ್ದು, ಅವುಗಳಲ್ಲಿ ತಿರುಪತಿಯ ವೆಂಕಟೇಶನನ್ನು ಹೋಲುವ ಒಂದು ವಿಗ್ರಹವೂ ಇತ್ತು. ಅದರ ಮುಂದೆ ಒಂದು ಪ್ರಾಣಿಯ ವಿಗ್ರಹವಿದ್ದು ಅದು ಸಿಂಹವನ್ನು ಹೋಲುತ್ತಿತ್ತು.ಲೋಕೇಶ ಈ ವಿಗ್ರಹಗಳಿಗೆ ಆಗಾಗ ಪೂಜೆಯೂ ಸಲ್ಲುತ್ತದೆ ಎಂಬುದಾಗಿ ತಿಳಿಸಿದ. ಮರದ ಹಿಂಭಾಗದಲ್ಲಿ ಶಿವಲಿಂಗವನ್ನು ಹೋಲುವ ಕಲ್ಲಿದ್ದು ಅದಕ್ಕೆ ಪೂಜೆಯನ್ನು ಮಾಡಿದ್ದರು.





ಕೋಟೆಯೊಳಗೆ ಒಂದು ಧ್ವಜಸ್ಥಂಬವಿದ್ದು ಸ್ವಾತಂತ್ರ್ಯ ಮತ್ತು ಗಣರಾಜ್ಯ ದಿನಾಚರಣೆಯಂದು ಇಲ್ಲಿ ಧ್ವಜಾರೋಹಣ ಮಾಡುತ್ತಾರೆ ಅಲ್ಲದೇ ಸುತ್ತಮುತ್ತಲಿನ ಶಾಲೆಗಳ ಸುಮಾರು 600 ವಿಧ್ಯಾರ್ಥಿಗಳು ಭಾಗವಹಿಸುವರು ಎಂಬುದಾಗಿ ಲೋಕೇಶ ಅಲ್ಲದೇ ಕೋಟೆಯನ್ನು ಕಾಯಲು ಸರ್ಕಾರದಿಂದ ನೇಮಕಗೊಂಡ ನೌಕರರೊಬ್ಬರು ತಿಳಿಸಿದರು.



ಕೋಟೆಯ ಹಿಂಬದಿಯಲ್ಲಿ ಸುಮಾರು 15 ಅಡಿ ಎತ್ತರವಿರುವ ಮತ್ತು ತೆಂಗಿನಮರದ ದಿಣ್ಣೆಯಷ್ಟು ದಪ್ಪವಿರುವ ಕಪ್ಪುಬಣ್ಣದ ಒಂದು ಕಂಬವಿದ್ದು ಇದನ್ನು 'ಕುದುರೆ ಕಂಬ' ಎನ್ನುವರು. ಈ ಕುದುರೆ ಕಂಬದ ಬದಿಯಲ್ಲಿ ನಿಂತು ನಾವು ಕೋಟೆಯ ಮಗ್ಗುಲಲ್ಲಿ ನಿರ್ಮಿಸಿದ ಕಂದಕಗಳನ್ನು ನೋಡಬಹುದಾಗಿದೆ. ಹಿಂದೆ ಕೋಟೆಯನ್ನು ವೈರಿಗಳಿಂದ ರಕ್ಷಿಸಲು ಇಂತಹ ಆಳವಾದ ಕಂದಕಗಳನ್ನು ತೋಡುತ್ತಿದ್ದರಂತೆ.



ಆಗ ಈ ಕಂದಕಗಳಲ್ಲಿ ನೀರೂ ಇರುತ್ತಿತ್ತು. ಆದರೆ ಈಗ ಇವುಗಳಲ್ಲಿ ಪಾರ್ಥೇನಿಯಮ್(ಕಾಂಗ್ರೆಸ್ ಗಿಡಗಳು ಎಂದೇ ಈಗ ಫೇಮಸ್ಸು!!) ಬೆಳೆದು ಅವುಗಳ ಆಳವೂ ಸರಿಯಾಗಿ ಕಾಣದಂತಾಗಿದೆ. ಕೋಟೆಯ ಮೂಲಕ ಒಂದು ಶಿಥಿಲಾವಸ್ಥೆಯಲ್ಲಿರುವ ಸುರಂಗವಿದೆ ಎಂದು ತಿಳಿದಿದ್ದರೂ ಆ ಸುರಂಗದ ಕಡೆ ತಲೆ ಹಾಕಲು ಮನಸ್ಸು ಬರಲಿಲ್ಲ.

ಸುತ್ತ ಮುತ್ತಲಿನ ಪರಿಸರ




ಮಿರ್ಜಾನಿನ ಕೋಟೆಯ ಎತ್ತರದ ಪ್ರದೇಶಗಳಲ್ಲಿ ನಿಂತು ನೋಡಿದರೆ ಕೆಲವು ಗದ್ದೆಗಳ ಅಂತರದಲ್ಲಿ ಹರಿಯುವ ಅಘನಾಶಿನಿ ನದಿ, ದೂರದಲ್ಲಿರುವ ಐಗಳ ಕೂರ್ವೆಗಳನ್ನೂ ನೋಡಬಹುದಾಗಿದೆ. ಒಟ್ಟಿನಲ್ಲಿ ಹಿಂದಿನ ಅವಶೇಶಗಳನ್ನೂ ಇನ್ನು ಉಳಿಸಿಕೊಂಡು ಬಂದಿರುವ ಈ ಕೋಟೆಯನ್ನು ನೋಡಿದಾಗ ಮನಸ್ಸಿಗೆ ಖುಷಿಯಾಗಿತ್ತು.

Monday, March 2, 2009

ಅಂಕೋಲೆಯಲ್ಲಿ ನಡೆದ ದಕ್ಷಿಣ ಭಾರತದ ವಾಲಿಬಾಲ್ ಪಂದ್ಯಾವಳಿ

ಕೊನೆಯ ಸೆಮ್ ಗಾಗಿ ಕಾಲೇಜಿಗೆ ಬರುವಾಗಲೇ 'ಇನ್ನು ಕೇವಲ ಹತ್ತು ದಿನಗಳಲ್ಲಿ ಅಂಕೋಲೆಯಲ್ಲಿ ದಕ್ಷಿಣ ಭಾರತ ಮಟ್ಟದ ವಾಲಿಬಾಲ್ ಪಂದ್ಯಾವಳಿ ಇದೆ.ಯಾವ ನೆಪದಲ್ಲಿ ಮನೆಗೆ ಬರಲಿ' ಎಂದು ವಿಚಾರ ಮಾಡುತ್ತಲೇ ಅಂಕೋಲೆಯಿಂ ಫೆಬ್ರುವರಿ 8 ರಾತ್ರಿ ಬಸ್ಸಿಗೆ ಹತ್ತಿದ್ದೆ. ವಾಲಿಬಾಲ್ ಪಂದ್ಯಾವಳಿ ಫೆಬ್ರುವರಿ 17 ರಿಂದ 21 ರವರೆಗೆ ಇತ್ತು.ನನ್ನ ಅದೃಷ್ಟವೋ ಏನೋ 23ರಂದು ಶಿವರಾತ್ರಿ ಕೂಡ ಇತ್ತು. ಕೊನೆಯ ಸೆಮ್ ನಲ್ಲಿ ಪ್ರಾಜೆಕ್ಟ್ ಗಾಗಿ ಪ್ರತೀ ವಾರದ ಸೋಮವಾರ,ಮಂಗಳವಾರ ಮತ್ತು ಬುಧವಾರ ರಜೆಯಿದ್ದುದರಿಂದ ಲ್ಲದೇ ಅದೇ ಸಂದಿನಲ್ಲಿ ಶಿವರಾತ್ರಿ ಬಂದುದರಿಂದ ದೇವರ ನೆಪವೊಡ್ಡಿ ಪಂದ್ಯಾವಳಿಯ ಕೊನೆ ದಿನ ಅಂದರೆ 21ರಂದು ಮನೆ ತಲುಪಿದೆ. ಮಹಿಳೆಯರ ಮತ್ತು ಪುರುಷರ ವಿಭಾಗದ ಅಂತಿಮ ಪಂದ್ಯಗಳು ಮಾತ್ರ ಉಳಿದುಕೊಂಡಿದ್ದವು ಎಂದು ತಿಳಿದಿತ್ತು.






ಪಂದ್ಯಾವಳಿ ನದೆಯುತ್ತಿದ್ದುದ್ದು ಅಗ್ಗರಗೋಣ ಎಂಬ ಗ್ರಾಮದಲ್ಲಿ. ಗಂಗಾವಳಿ ನದಿಯ ಬಲ ದಿಕ್ಕಿನಲ್ಲಿ ಇರುವ ಚೆಂದದ ಊರು. ಹಿಂದೆ ಊರ ಬಗ್ಗೆ ಕೇಳಿದ್ದರೂ ಸಹ ಊರನ್ನು ನೋಡಿರಲಿಲ್ಲ. ಅಲ್ಲದೇ ಊರಿನ ಸೊಬಗನ್ನು ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ಜಿ.ಎಚ್.ನಾಯಕರು ತಮ್ಮ 'ಗುಣಗೌರವ' ಎಂಬ ಲೇಖನಗಳ ಸಂಕಲನವೊಂದರಲ್ಲಿ ವರ್ಣಿಸಿದ್ದುದನ್ನು ಕೆಲವೇ ದಿನಗಳ ಹಿಂದೆ ಓದಿದ್ದಕ್ಕೋ ಏನೋ ಊರನ್ನು ಕಾಣುವ ಹಂಬಲ ಹೆಚ್ಚಾಗುತ್ತಿತ್ತು.ಅಗ್ಗರಗೋಣಿಗೆ ನಮ್ಮ ಮನೆಯಿಂದ ಗಂಗಾವಳಿ ತಾರಿಯನ್ನು ದಾಟಿ ಹೋಗಬಹುದು ಇಲ್ಲವೇ ರಾಷ್ಟ್ರೀಯ ಹೆದ್ದಾರಿ-17 ಮೂಲಕ ಮಾದನಗೇರಿ ಕ್ರಾಸ್ ವರೆಗೆ ಹೋಗಿ ಅಲ್ಲಿಂದ ಒಳರಸ್ತೆಯಲ್ಲಿ ಹೋಗಬಹುದು. ಬೈಕ್ ಹೊಡೆಯುವ ಚಪಲ ತುಸು ಜಾಸ್ತಿಯೇ ಇದ್ದುದರಿಂದ ಎರದನೇಯ ಆಯ್ಕೆಯನ್ನು ಆಯ್ಕೆಮಾಡಿ ಅಗ್ಗರಗೋಣಿನ ಕಡೆಗೆ ಹೊರಟೆ.ಗಂಗಾವಳಿ ರೈಲ್ವೆ ಬ್ರಿಡ್ಜು, ಅಂಕೋಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಅನೇಕ ರೋಚಕ ಘಟನೆಗಳಿಗೆ ಸಾಕ್ಷಿಯಾದ ಶಿರೂರು ಮತ್ತು ಉಳುವರೆ ತಾರಿಗಳು ಎಲ್ಲವನ್ನೂ ಮೊದಲ ಬಾರಿಗೆ ನೋಡಿದ ಕಾರಣಕ್ಕಾಗಿ ಮನದಲ್ಲಿ ಏನೋ ಸಾರ್ಥಕತೆಯ ಅನುಭವ.

ಸುಮಾರು 5.30 ಸುಮಾರು ಅಗ್ಗರಗೋಣದ ವಾಲಿಬಾಲ್ ಕ್ರೀಡಾಂಗನವನ್ನು ತಲುಪಿದೆ. ಆದರೆ ಪಂದ್ಯ ಶುರುವಾಗಲು ಇನ್ನೂ ಒಂದುವರೆ-ಎರಡು ಘಂಟೆಗಳು ಬಾಕಿ ಇದ್ದವು. ಏಕಾಂಗಿತನ ಕಾಡಲು ಶುರುವಾಗಿತ್ತು. ಆಗ ನೆನಪಿಗೆ ಬಂದವನು ಬೆಂಗಳುರಿನಲ್ಲಿ ಓದುತ್ತಿದ್ದ ವಿಕ್ಕಿ. ಆತನ ಮನೆಯನ್ನು ಹುಡುಕಿ ಆತನನ್ನು ಭೇಟಿಯಾದ ನಂತರ ಒಬ್ಬೊಬ್ಬರೇ ಪರಿಚಯವಾಗಲು ಶುರುವಾದರು. ಊರಿನ ಸಮೀಪದಲ್ಲೇ ಹರಿಯುತ್ತಿದ್ದ ಗಂಗಾವಳಿಯನ್ನೂ ನೋಡಿ ಆಯಿತು.



ಸೂರ್ಯ ತನ್ನ ದಿನದ ಡ್ಯೂಟಿಯನ್ನು ಮುಗಿಸಾಗಿತ್ತು. ಕ್ರೀಡಾಂಗಣವನ್ನು ಪುನಃ ಸೇರುತ್ತಿದ್ದಂತೆಯೇ ' ಮಹಿಳೆಯರ ಅಂತಿಮ ಪಂದ್ಯ ಕೆಲವೇ ಕ್ಸಃಅಣಗಳಲ್ಲಿ ಶುರುವಾಗಲಿದೆ' ಎಂಬ ಆಕಾಶವಾಣಿ ಹೊರಬಿತ್ತು.






ಹೆಚ್ಚೆಂದರೆ ಎರಡು ಸಾವಿರ ಜನ ಬರಬಹುದು ಎಂಬ ಭ್ರಮೆಯಲ್ಲಿದ್ದ ನನಗೆ ಅಲ್ಲಿನ ಏಳರಿಂದ ಎಂಟು ಸಾವಿರ ಜನರ ಜನಸಾಗರವನ್ನು ಕಂಡಾಗ ಅಚ್ಚರಿಯ ಜೊತೆಗೆ ಖುಷಿಯೂ ಅಯಿತು.ಕೇರಳ ಮತ್ತು ತಮಿಳುನಾಡು ತಂಡಗಳು ಸೆಣಸುತ್ತಿದ್ದವು. ಕೊನೆಯ ಸೆಟ್ ನವರೆಗೆ ಹೋದ ಪಂದ್ಯವನ್ನು ಕೇರಳ 3-2 ರಿಂದ ಗೆದ್ದರೂ ಪ್ರಬಲ ಹೋರಾಟ ನೀಡಿದ ತಮಿಳುನಾಡೂ ಸಹ ಜನರ ಗೌರವಕ್ಕೆ ಪಾತ್ರವಾಯಿತು.ಪುರುಷರ ವಿಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಫೈನಲ್ ಹಂಅವನ್ನು ತಲುಪಿದ್ದವು.



ಹಿಂದಿನ ದಿನವೇ ಬಲಿಷ್ಠ ಕೇರಳವನ್ನು ಸೋಲಿಸಿದ್ದುದರಿಂದ ಕರ್ನಾಟಕವೇ ಫೈನಲ್ ಗೆಲ್ಲಬಹುದು ಎಂಬೆಲ್ಲ ಜನರ ಲೆಕ್ಕಾಚಾರದ ನಡುವೆಯೇ ಪಂದ್ಯ ಪ್ರಾರಂಭವಾಯಿತು. ಆದರೆ ಮೊದಲ ಸೆಟ್ ನಿಂದಲೇ ತನ್ನ ಸೋಲೆಂಬ ಸಮಾಧಿಗೆ ಅಡಿಗಲ್ಲನಿಟ್ಟ ಕರ್ನಾಟಕ ಮುಂದೆ ಚೇತರಿಸಿಕೊಳ್ಳಲಿಲ್ಲ. ಮೊದಲ ಮೂರು ಸೆಟ್ ಗಳನ್ನು ಸೋಲುವುದರ ಮೂಲಕ ಶರಣಾದ ಕರ್ನಾಟಕ , ತಮಿಳುನಾಡಿಗೆ ಜಯವನ್ನು ಬಿಟ್ಟುಕೊಟ್ಟಿತು.



ವಿವರಣೆಗಾರರು ತಮ್ಮ ಕುಚೋದ್ಯ ಮಾತುಗಳಿಂದ ಜನರನ್ನು ನಗಿಸಿದರೂ ಸಹ ಕರ್ನಾಟಕ ಸೋತದ್ದಂತೂ ಜನರಲ್ಲಿ ನಿರಾಶೆ ಮೂಡಿಸಿತ್ತು. ಪಂದ್ಯಾವಳಿ ನಡೆಯಲು ತಮ್ಮಿಂದಾದ ಸಕಲ ಸಹಾಯಗಳನ್ನು ಮಾಡಿದ ಗೋಕರ್ಣದ ಸ್ವಾಮೀಜಿಗಳು ಸಹ ಪಂದ್ಯವನ್ನು ವೀಕ್ಷಿಸಿದ್ದು ವಿಶೇಷ. ರಾತ್ರಿಯೇ ನಮ್ಮ ದೊಡ್ಡಮ್ಮನ ಮಗನ ಜೊತೆ ಬೇಲೇಕೇರಿಯನ್ನು ಸೇರಿದಾಗ ಎರಡು ಕಾಲಾದರೂ ವಾಲಿಬಾಲ್ ನೆಪದಲ್ಲಿ ಅಗ್ಗರಗೋಣದಂತಹ ಚೆಂದದ ಊರನ್ನು ನೋಡಿದ್ದು ಮನಸ್ಸಿಗೆ ಖುಷಿ ಕೊಟ್ಟಿತ್ತು.

Friday, January 2, 2009

ಚರಿತ್ರೆಯಲ್ಲಿ ಮರೆತವರ ಕಥೆ

ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಬರೆಯಬೇಕು ಎಂದೆಣೆಸಿಕೊಂಡರೂ ಕಾಲ ಕೂಡಿ ಬಂದಿರಲಿಲ್ಲ. ನಿಜವಾಗಿ ಹೇಳಬೇಕೆಂದರೆ ನನಗೂ ನಮ್ಮ ಅಂಕೋಲೆಯಲ್ಲಿ ಸ್ವಾತಂತ್ರ್ಯ ಹೋರಾಟ ವೀರೋಚಕವಾಗಿ ನಡೆದಿತ್ತು ಎಂಬ ವಿಷಯ ಬಿಟ್ಟರೆ ಬೇರೇನೂ ಹೆಚ್ಚಿಗೆ ತಿಳಿದಿರಲಿಲ್ಲ .ನಾನು ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಆಗಿನ ಸಮಾಜ ವಿಜ್ಞಾನದ ಪುಸ್ತಕದಲ್ಲಿ ಇದ್ದ "ಅಂಕೋಲಾ, ಶಿರಸಿ ಮತ್ತು ಸಿದ್ದಾಪುರಗಳಲ್ಲಿ ಉಪ್ಪಿನ ಸತ್ಯಾಗ್ರಹವು ನಡೆದಿತ್ತು" ಎಂಬ ವಾಕ್ಯ ಇನ್ನೂ ಆಗಾಗ ಮನಸ್ಸಿನ ಕಣ್ಮುಂದೆ ಸುಳಿಯುತ್ತಿರುತ್ತದೆ. ಅದನ್ನು ಬಿಟ್ಟರೆ ತಂದೆಯವರು ಕೆಲವೊಮ್ಮೆ ಊರಿನ ಹಿರಿಯರ ಹೆಸರುಗಳನ್ನು ಹೇಳಿ ಇವರೆಲ್ಲ ಈ ರೀತಿ ಹೋರಾಡಿದ್ದರಂತೆ ಎಂದು ಹೇಳುತ್ತಿದ್ದರು.ಇಷ್ಟನ್ನೂ ಬಿಟ್ಟರೆ ನನಗೆ ಅಂಕೋಲೆಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಈ ಹೋರಾಟದ ಬಗ್ಗೆ ಹಿಚ್ಕಡ ಶಾಂತಾರಾಮ ನಾಯಕರು "ಚರಿತ್ರೆಯಲ್ಲಿ ಮರೆತವರ ಕಥೆ" ಎಂಬ ಪುಸ್ತಕವೊಂದನ್ನು ಬರೆದಿದ್ದಾರೆ ಎಂದು ನಮ್ಮ ಪಿ.ಯು. ಕಾಲೇಜಿನ ಹಬ್ಬು ಅವರು ಹೇಳಿದಾಗ ಅದನ್ನು ಓದಲು ಮನಸಾಗಿ ಅದನ್ನು ಹೇಗೋ ಹುಡುಕಿ ಓದಲು ಕುಳಿತೆ. ನೀವು ಇಂದೂ ಅಂಕೋಲೆಗೆ ಬಂದರೆ ಅಲ್ಲಲ್ಲಿ "ಸ್ವಾತಂತ್ರ್ಯ", "ಸಂಗ್ರಾಮ" ಮುಂತಾದ ಪದಗಳನ್ನು ಎತ್ತಿ ಹಿಡಿಯುವ ಅನೇಕ ಕಟ್ಟಡಗಳನ್ನು ನೋಡಬಹುದು. ಸ್ವಾತಂತ್ರ್ಯ ಸಂಗ್ರಾಮ ವೇದಿಕೆ, ಸತ್ಯಾಗ್ರಹ ಸ್ಮಾರಕ, ಗಾಂಧಿ ಮೈದಾನ, ಕ್ರಾಂತಿ ಮೈದಾನ ಹೀಗೆ ನಡೆದ ಹೋರಾಟದ ಅನೇಕ ನೆನಪುಗಳನ್ನು ತಮ್ಮ ಒಡಲಿನಲ್ಲಿಟ್ಟುಕೊಂಡು ಕಲ್ಲಾಗಿ ನಿಂತಿರೋ ಅದೆಷ್ಟೋ ಕುರುಹುಗಳು ಇಂದಿಗೂ ಅಂಕೋಲೆಯಲ್ಲಿವೆ.



1995ರಲ್ಲೇ ಬಿಡುಗಡೆಯಾದ ಈ ಪುಸ್ತಕವನ್ನು ಓದುತ್ತಿದ್ದ ರಾತ್ರಿಯಂತೂ ನಾನೂ 1930-40ರ ದಶಕದಲ್ಲೇ ಇದ್ದೇನೋ ಎಂಬಂತೆ ಅನಿಸುತ್ತಿತ್ತು . ಆ ರೀತಿ ಇದ್ದವು ನಡೆದ ಘಟನೆಗಳು ಮತ್ತು ಅದನ್ನು ಪರಿಪರಿಯಾಗಿ ಬಿಚ್ಚಿಟ್ಟ ರೀತಿ. ನಾಡವರು, ಒಕ್ಕಲಿಗರು,ಕೊಂಕಣಿಗರು ಹೀಗೆ ಎಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಡಿದ್ದನ್ನು ಒದುತ್ತಿದ್ದರೆ ಮೈ ಝುಮ್ ಎನ್ನುತ್ತಿತ್ತು. ಬ್ರಿಟಿಷರಿಗೆ ಸತಾಯಿಸಿದ ರೀತಿ, ನಂತರ ಅವರಿಂದ ತಪ್ಪಿಸಿಕೊಳ್ಳಲು ಹೋಡಿದ ಉಪಾಯಗಳು ಮತ್ತು ಆ ಸಂದರ್ಭದಲ್ಲಿ ನಡೆದ ಘಟನೆಗಳು ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಾಯಕರು ಬರಿದಿದ್ದಾರೆ.


ಚಿತ್ರ ಕೃಪೆ:http://www.kamat.com/

ಈ ಪುಸ್ತಕವನ್ನು ಓದುತ್ತಿದ್ದರೆ ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಗಂಗಾವಳಿಯ ಮೇಲೆ ಹೆಮ್ಮೆ ಎನಿಸುತ್ತಿತ್ತು.ಗಂಗಾವಳಿ ನದಿಯೂ ಅನೇಕ ಬಾರಿ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ತಪ್ಪಿಸಿಕೊಳ್ಳಲು ಸಹಾಯಮಾಡಿತ್ತು . ಗಂಗಾವಳಿ ನದಿಯ ಎಕ್ಕೆಲ ಬದಿಗಳಲ್ಲಿ ಇರುವ ಎಲ್ಲ ಹಳ್ಳಿಗಳೂ ಈ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವು. ಸೂರ್ವೆಯಲ್ಲಿರುವ ಕಲಶ ದೇವಸ್ಥಾನ, ಉಳುವರೆಯ ತಾರಿ, ಹಿಚ್ಕಡ ಆ ಗುಡ್ಡಗಳು ಇವೆಲ್ಲವೂ ನಡೆದ ಇತಿಹಾಸಕ್ಕೆ ಇನ್ನೂ ಮೂಕ ಪ್ರೇಕ್ಷಕರಂತೆ ನಿಂತಿವೆ.ಅದೆಷ್ಟೋ ಸಾವಿರಾರು ಜನರು ಇಲ್ಲಿ ಹೋರಾಡಿದರೂ ಅನೇಕರು ಇತಿಹಾಸದ ಪುಟಗಳಲ್ಲಿ ಮಾಯವಾಗಿದ್ದಾರೆ. ಅಂತಹವರೆಲ್ಲರನ್ನೂ ಈಗಿನ ಯುವ ಪೀಳೀಗೆಗೆ ಪರಿಚಯಿಸಿ ಕೊಡುವ ಒಳ್ಳೆಯ ಕಾರ್ಯವನ್ನು ಮಾನ್ಯ ನಾಯಕರು ಈ ಪುಸ್ತಕದ ಮೂಲಕ ಮಾಡಿದ್ದಾರೆ. ಅಂಕೋಲೆಯಲ್ಲಿ ನಡೆದ ಈ ಹೋರಾಟದ ಕುರಿತು ಹೇಳುವ ಇನ್ನೂ ಎರಡು ಮೂರು ಪುಸ್ತಕಗಳು ಇವೆ ಎಂದು ತಿಳಿದುಬಂದಿದ್ದು ಸದ್ಯ ಅವನ್ನೆಲ್ಲ ಹುಡುಕುತ್ತಿದ್ದು ಒಂದು ವೇಳೆ ಅವೇನಾದರೂ ಸಿಕ್ಕರೆ ಅದರೆ ಬಗ್ಗೆ ಇನ್ನೊಮ್ಮೆ ಬರೆವೆ.

Wednesday, December 24, 2008

ಅಂಕೋಲೆಯಲ್ಲಿ ದಿನಕರ ದೇಸಾಯಿಯವರ ಕುರಿತು ನಡೆದ ವಿಚಾರ ಸಂಕಿರಣ

ಈ ವರ್ಷ ದಿನಕರ ದೇಸಾಯಿಯವರ ಜನ್ಮ ಶತಮಾನೋತ್ಸವವೆಂದು ಹಿಂದೊಮ್ಮೆ ಬರೆದಿದ್ದೆ. ಈ ಬಾರಿ ಅದರೆ ಅಂಗವಾಗಿ ನಡೆದ ಕಾರ್ಯಕ್ರಮದ ಬಗ್ಗೆ ಬರೆಯುತ್ತಿದ್ದೇನೆ.

ಸುಮಾರು ಒಂದು ವಾರದ ಹಿಂದೆ ಅಂಕೋಲೆಗೆ ಹೋಗಿದ್ದೆ. ನನ್ನ ಪ್ರಾಯೋಗಿಕ ಪರೀಕ್ಷೆಗಳೆಲ್ಲವೂ ಸುಳಿತಾಗಿ ಆದುದ್ದರಿಂದ ಅಲ್ಲದೇ ಥೇರಿ ಪರೀಕ್ಷೆಗಳಿಗೆ ಇನ್ನೂ  2 ವಾರದ  ರಜೆ   ಇದ್ದುದರಿಂದ  ಊರಲ್ಲೇ ಓದೋಣವೆಂದು  ತಾಯ್ನಾಡಿಗೆ ಮುಖ ಮಾಡಿದ್ದೆ.  ಮನೆಗೆ ಹೋದಾಗ ತಿಳಿಯಿತು. ಕೇಂದ್ರ  ಸಾಹಿತ್ಯ ಅಕಾಡೆಮಿ ಮತ್ತು ಅಂಕೋಲೆಯ ದಿನಕರ  ದೇಸಾಯಿ ಪ್ರತಿಷ್ಠಾನ  ಸೇರಿ  ದಿನಕರ ದೇಸಾಯಿಯವರ  ಜನ್ಮಶತಮಾನೋತ್ಸವದ  ಅಂಗವಾಗಿ   ಡಿಸೆಂಬರ್ 13 ಮತ್ತು 14 ರಂದು ಅಂಕೋಲೆಯ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಯಲ್ಲಿ ಅವರ ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಿದ್ದಾರೆ ಎಂದು. ಅಲ್ಲದೇ ಆಗಾಗ ಇದರ ಬಗ್ಗೆ ಅಂಕೋಲೆಯ ಬಿ.ಬಿ.ಸಿ ಹಾಗೂ ಸಿ.ಎನ್.ಎನ್. ಗಳಂತೆ ಕಾರ್ಯನಿರ್ವಹಿಸುತ್ತಿರುವ ಆರ್ಯ ನ್ಯೂಸ್ ಮತ್ತು ಕೆನರಾ ನ್ಯೂಸ್ ಗಳಲ್ಲೂ ಪ್ರಕಟನೆ ಬರುತ್ತಿತ್ತು. 'ಹೇಗಿರುತ್ತೆ ನೋಡೋಣ'ವೆಂದು ಸಮಾಜ ಮಂದಿರದ ಮುಂದಿರುವ ಸ್ವಾತಂತ್ರ್ಯ ಸಂಗ್ರಾಮ ವೇದಿಕೆಗೆ ಹೋದೆ.




13ನೇ ತಾರೀಖು ಬೆಳಿಗ್ಗೆ ವಿಚಾರ ಸಂಕಿರಣವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿಯವರು ಉದ್ಘಾಟಿಸಿದ್ದರು. ನಾನು ಅಲ್ಲಿಗೆ ಹೋಗಲು ಸ್ವಲ್ಪ ತಡವಾದ್ದರಿಂದ ಅದನ್ನು ನೋಡಲಾಗಲಿಲ್ಲ.ದೊರೆಸ್ವಾಮಿಯವರು ಸರಕಾರದ ನೀತಿಗಳಿಂದ ಜನಸಾಮಾನ್ಯರಿಗೆ ಅದರಲ್ಲೂ ಮುಖ್ಯವಾಗಿ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಮತನಾಡಿದರಂತೆ. 
ಕಾಗೋಡು ಸತ್ಯಾಗ್ರಹದಲ್ಲಿ ಮುಂಚೂಣಿ ಹೋರಾಟಗಾರರಾಗಿದ್ದ  ಎಚ್.ಗಣಪತಿಯಪ್ಪ ನವರೂ ಇನ್ನೋರ್ವ ಅತಿಥಿಯಾಗಿ ಬಂದಿದ್ದರು.ನನಗೆ ಅವರ ಮಾತನ್ನು ಕೇಳಲು ಅವಕಾಶ ಸಿಕ್ಕಿತು. "ಈಡೀ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ದುಡಿದ ದಿನಕರ ದೇಸಾಯಿಯವರನ್ನು ಈ ಸಂದರ್ಭದಲ್ಲಿ ನೆನೆಯುವುದು ನಮ್ಮೆಲ್ಲರ ಕರ್ತವ್ಯ.ಅವರೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಭೂಸುಧಾರಣೆಯ ಬೀಜ ಬಿತ್ತಿದ್ದು" ಎಂದರು.


ಎಚ್.ಗಣಪತಿಯಪ್ಪನವರು ಮಾತನಾಡುತ್ತಿರುವುದು

ಸುಮಾರು 57 ಗಣ್ಯರು ಈ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.ಇವರಲ್ಲಿ ಕವಿಗಳು, ಲೇಖಕರು, ವಿಮರ್ಶಕರು, ಸಂಶೋಧನಾಕಾರರು ಎಲ್ಲರೂ ಇದ್ದರು. ಪ್ರತಿಯೊಬ್ಬರೂ ದಿನಕರರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಗಳ ಬಗ್ಗೆ ಪ್ರಬಂಧವನ್ನು ಮಂಡಿಸುತ್ತಿದ್ದರು.

ಮೊದಲನೇ ದಿನ ಅಂದರೆ 13ನೇ ತಾರೀಖಿನಂದು ಜಯಂತ್ ಕಾಯ್ಕಿಣಿಯವರು ತಮ್ಮ ತಂದೆ ಗೌರೀಶ್ ಕಾಯ್ಕಿಣಿಯವರು ದಿನಕರರನ್ನು "ಜನತಾ ಕವಿ" ಎಂದು ಸಂಭೋದಿಸಿದ್ದನ್ನು ನೆನೆಯುತ್ತ ಅವರ ಅನೇಕ ಮಕ್ಕಳ ಪದ್ಯಗಳನ್ನು ಓದಿ ಅದರಲ್ಲಿದ್ದ ಸ್ವಾರಸ್ಯವನ್ನು ಹೇಳಿದರು. 'ಕರಾವಳಿ ಮುಂಜಾವು' ಪತ್ರಿಕೆಯ ಸಂಪಾದಕರಾದ ಗಂಗಾಧರ ಹೀರೆಗುತ್ತಿಯವರು "ದಿನಕರರ ಪತ್ರಿಕಾ ಬರಹ" ವಿಷಯದ ಕುರಿತು ತಮ್ಮ ಅಭಿಪ್ರಾಯವನ್ನು ಮಂಡಿಸಿದರು.


ದಿನಕರರ ಸಂಶೋಧನಾ ಗ್ರಂಥವಾದ "ಕಲ್ಯಾಣಿಯ ಚಾಲುಕ್ಯರ ಮಹಾಮಾಂಡಲೀಕರು" ಬಗ್ಗೆ ಸುಮತಿ ನಾಯಕರು ಮಾತನಾಡಿ ದಿನಕರರಲ್ಲಿ ಅತ್ಯುತ್ತಮ ಇತಿಹಾಸ ಸಂಶೋಧನಾಕಾರನಾಗುವ ಎಲ್ಲ ಅರ್ಹತೆಗಳೂ ಇತ್ತು ಎಂದರು.

ವಿದ್ಯಾರ್ಥಿಗಳಿಗೆ ಹಸ್ತಾಕ್ಷರ ನೀಡುತ್ತಿರುವ ಕಾಯ್ಕಿಣಿಯವರು 

ಜಿನದತ್ತ ದೇಸಾಯಿಯವರು ಮಾತನಾಡುತ್ತಿರುವುದು

ಮೊದಲನೇ ದಿನ ಇನ್ನೂ ಅನೇಕ ವಿಷಯಗಳ ಮೇಲೆ ಅಂದರೆ ಅವರ ಪ್ರವಾಸ ಕಥನ "ನಾ ಕಂಡ ಪಡುವಣ", ಅವರ ಚುಟುಕುಗಳು, ಭಾವಗೀತೆಗಳ ಕುರಿತು ವಿಚಾರಗಳು ಮಂಡಿಸಲ್ಪಟ್ಟವು.ಸಂಜೆ ಸುಮಾರು 7.30ಯಿಂದ 8.30 ವರೆಗೆ ಹೊನ್ನಾವರದ "ಚಿಂತನ" ಸಂಘದವರು "ಬೆಳಕಿನೆಡೆಗೆ" ಎಂಬ ನೀತಿನಾಟಕವನ್ನು ಆಡಿತೋರಿಸಿದರು. ಅದನ್ನು ನೋಡಿ ಊರಿಗೆ ಹೋಗುವ ಕೊನೆಯ ಬಸ್ಸಿಗೆ ಅಂದರೆ 'ಹಾಳ್ಟಿಂಗ್ ಬಸ್'ಗೆ ಹೋಗಿ ಮನೆ ಸೇರಿ ಕೊಂಡಾಗ ಸಮಯ 9.30..



"ಚಿಂತನ"  ಅಧ್ಯಯನ ಕೇಂದ್ರದವರಿಂದ ನಾಟಕ ಪ್ರದರ್ಶನ



ಮಾರನೆಯ ದಿನ ಹೆಗ್ಗೋಡಿನ ಪ್ರಸನ್ನರವರು ಅತಿಥಿಯಾಗಿ ಬಂದಿದ್ದರು.ದುಂಡಿರಾಜ್ ಇನ್ನು ಮುಂತಾದ ಚುಟುಕುಕಾರರು ಆಗಮಿಸಿದ್ದರು. 

ಸಂಜೆಯ ಸಮಾರೋಪ ಸಮರಂಭಕ್ಕೆ ಕರ್ನಾಟಕದ ಶ್ರೇಷ್ಠ ವಿಮರ್ಶಕರುಗಳಲ್ಲಿ ಒಬ್ಬರಾದ ಪ್ರೊ.ಜಿ.ಎಚ್.ನಾಯಕರು ಮತ್ತು ಅಕ್ಬರ್ ಅಲಿಯವರು ಅತಿಥಿಯಾಗಿ ಬಂದಿದ್ದರು. ಅಂಕೋಲೆಯ ಸೂರ್ವೆ(ನಮ್ಮೂರು)ಯವರಾದ ಜಿ.ಎಚ್.ನಾಯಕರು ಈಗ ಮೈಸೂರಿನಲ್ಲಿ ನೆಲಸಿದ್ದಾರೆ.ಇವರು ಮಾತನಾಡುತ್ತ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕಂದ ದಿನಕರ ಬಗ್ಗೆ ಹೇಳಿದರು.ನಾನು ಚಿಕ್ಕವನಾಗಿದ್ದಾಗಲೇ ತಂದೆಯವರು ಆಗಾಗ ಜಿ.ಎಚ್.ನಾಯಕರ ಬಗ್ಗೆ ಹೇಳುತ್ತಿದ್ದರೂ ಅವರನ್ನು ಮತ್ತು ಅವರು ಮಾತನಾಡುವುದನ್ನು ಕಂಡಿದ್ದು ಇದೇ ಮೊದಲಾಗಿತ್ತು. ಅಲ್ಲದೇ ಇವರು ನಮ್ಮೂರಿನವರು ಎಂಬುದು ಎದೆಯನ್ನು ಉಬ್ಬಿಸಿತ್ತು.


ಪ್ರೊ.ಜಿ.ಎಚ್.ನಾಯಕರು

ಅಕ್ಬರ್ ಅಲಿಯವರು ದಿನಕರರು ಕರ್ನಾಟಕದ ಏಕೀಕರಣಕ್ಕೆ ಶ್ರಮಿಸಿದುದನ್ನು ನೆನೆಸಿಕೊಂಡರು.ಸಾಹಿತ್ಯ ಅಕಾಡೆಮಿಯ ಸಂಚಾಲಕರಾದ ಸಿದ್ದಲಿಂಗಯ್ಯ ಪಟ್ಟಣಶೆಟ್ಟಿಯವರು ಎಲ್ಲ ಸಹಕಾರವನ್ನೂ ನೀಡಿ ದಿನಕರ ದೇಸಾಯಿಯವರ ಕುರಿತು ನವಭಾರತದ ನಿರ್ಮಾಪಕರ ಮಾಲಿಕೆಯಲ್ಲಿ ಪುಸ್ತಕವನ್ನೂ ಹೊರತಂದರು. ಅಲ್ಲದೇ ಬೇಕಾದ ಎಲ್ಲ ಸಹಕಾರವನ್ನು  ಮುಂದೆಯೂ ನೀಡುವುದಾಗಿ ಹೇಳಿದರು. 


ಕೊನೆಯಲ್ಲಿ ವಿಷ್ಣು ನಾಯ್ಕರು ಮಾತನಾಡುತ್ತ ಇಂದಿನ ಯುವಪೀಳಿಗೆ ಎಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆಯಿತ್ತರು.



ನಾನು ಅಂಕೋಲೆಯವನಾದರೂ ನನ್ನ ಹೆಚ್ಚಿನ ವಿಧ್ಯಾಭ್ಯಾಸಗಳನ್ನೆಲ್ಲ ಮಾಡಿದ್ದು ಅಂಕೋಲೆಯ ಹೊರಗೆ. ಆದ್ದರಿಂದ ಇಲ್ಲಿನ ಸಾಹಿತಿಗಳ ಬಗ್ಗೆ ಕೇಳಿದ್ದೆ, ಓದಿದ್ದೆಯಾದರೂ ಕಂಡಿರಲಿಲ್ಲ. ಆದರೆ ಈ ಒಂದು ವಿಚಾರ ಸಂಕಿರಣ ಆ ಎಲ್ಲರನ್ನೂ ಕಾಣಲು ಅವಕಾಶವನ್ನು ಮಾಡಿಕೊಟ್ಟಿತ್ತು.ಅಂಕೋಲೆಯನ್ನು ಒಂದು ಸಾಹಿತಿಕ ಕೇಂದ್ರವನ್ನಾಗಿ ಮಾಡಿದ ಶ್ರೀ ವಿಷ್ಣು ನಾಯ್ಕರು, ದಿನಕರರ "ಜನಸೇವಕ" ಪತ್ರಿಕೆಯ ಸಂಪಾದಕರಾದ ಅಮ್ಮೆಂಬಳ ಆನಂದರು,ಅಂಕೋಲೆಯ ಸ್ವಾತಂತ್ರ್ಯ ಹೋರಾಟ ಮತ್ತು ಹೋರಾಟಗಾರರ ಬಗ್ಗೆ "ಚರಿತ್ರೆಯಲ್ಲಿ ಮರೆತವರ ಕಥೆ" ಎಂಬ ಪುಸ್ತಕ ಬರೆದು ಹಿರಿಯರ ದೇಶಪ್ರೇಮವನ್ನು ಯುವಪೀಳಿಗೆಗೆ ತಿಳಿಸುವ ಮಹೋನ್ನತ ಕಾರ್ಯವನ್ನು ಮಾಡಿದ ಶಾಂತಾರಮ ನಾಯಕರು, ಶೇಟಗೇರಿ ಯಲ್ಲಿ ವಿದ್ಯಾಸಂಸ್ಥೆಯೊಂದನ್ನು ಮುನ್ನಡೆಸಿಕೊಂಡು ಹೋಗಿ ಸಾವಿರಾರು ಜನರಿಗೆ ವಿದ್ಯಾದಾನವನ್ನು ಮಾಡಿದ ವಿ.ಜಿ.ನಾಯಕರನ್ನೆಲ್ಲ ನೋಡಿ ಮನಸ್ಸಿಗೆ ಅತೀವ ಸಂತೋಷವಾಯಿತು. ನಮ್ಮೂರಿನ ಮಾದೇವ ಮಾಸ್ತರರು  ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ನನ್ನೊಡನೆ ಇದ್ದು ಅನೇಕ ವಿಚಾರಗಳನ್ನು ಮತ್ತು ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಇನ್ನು ಅನೇಕ ಮಹನೀಯರನ್ನು ನೋಡುವ ಅವರನ್ನು ಮಾತನಾಡಿಸುವ ಅವಕಾಶ ಸಿಕ್ಕಿತು.ಅವರು ದೇಶಕ್ಕಾಗಿ ಮತ್ತು ಜನರಿಗಾಗಿ ಮಾಡಿದ ಕೆಲಸಗಳನ್ನು ನೆನೆಯುವ ಮತ್ತು ಅದನ್ನು ಮುಂದುವರೆಸಿಕೊಂಡು ಹೋಗುವ ಭಾರ ನಮ್ಮ ಮೈಮೇಲಿದೆ.

ಬಲಬದಿಯಿಂದ ಮೂರನೇಯವರು ಎಚ್.ಎಸ್.ದೊರೆಸ್ವಾಮಿಯವರು

ಒಟ್ಟಿನಲ್ಲಿ ಪರೀಕ್ಷೆಗೆಂದು ಓದಲು ಹೋದವನಿಗೆ ಈ ವಿಚಾರಗೋಷ್ಟಿ ಜೀವನವೆಂಬ ಪರೀಕ್ಷೆಯಲ್ಲಿ ಯಾರು ಯಾವ ಯಾವ ರೀತಿಯಲ್ಲಿ ಹೋರಾದಿದ್ದರು ಎಂಬ ಹೊಸ ಜೀವನದ ಪಾಠ ಕಲಿಸಿಕೊಟ್ಟಿತು.


Thursday, December 18, 2008

ಬೆಂಗಳೂರು ಪುಸ್ತಕೋತ್ಸವ 2008


ನವೆಂಬರ್ 16ರಿಂದ 23ರವರೆಗೆ ಬೆಂಗಳೂರಿನಲ್ಲಿ ಪುಸ್ತಕೋತ್ಸವ ನಡೆಯಿತು. ಇದರ ಬಗ್ಗೆ ಹಿಂದು ದಿನಪತ್ರಿಕೆಯಲ್ಲಿ ಜಾಹಿರಾತನ್ನು ನೀಡಿದ್ದರು. ದೇಶದಲ್ಲಿ ಎರಡನೇ ಅತೀ ದೊಡ್ಡ ಈ ಪುಸಕೋತ್ಸವ. ಆದ್ದರಿಂದ ನೋಡೋಣ ಹೇಗಿರುತ್ತೆ ಬೆಂಗಳೂರಿನ ಪುಸ್ತಕೋತ್ಸವ ವೆಂದು ನೋಡಲು ನವೆಂಬರ್ 20ರಂದು ಹೋಗಿದ್ದೆ. ಈ ಪುಸ್ತಕ ಮೇಳವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿತ್ತು.






ಸುಮಾರು 250ಕ್ಕೂ ಹೆಚ್ಚು ಪ್ರಕಾಶನಗಳು, ಪುಸ್ತಕ ಮಳಿಗೆ ಗಇಲ್ಲಿ ಪಾಲ್ಗೊಂಡಿದ್ದವು. ಎಲ್ಲೆಲ್ಲೂ ಪುಸ್ತಕವೇ. ಕೆಲವೆಡೆ ಹಳೆ ಹಳೆ ಪುಸ್ತಕಗಳಾದರೇ ಇನ್ನು ಕೆಲವೆಡೆ ವಿವಿಧ ವರ್ಣಮಯ ಪುಟಗಳಿಂದ ಓದುಗರನ್ನು ಸೆಳೆಯುವ ಹೊಸ ಪುಸ್ತಕಗಳು.



ಈ ಪುಸ್ತಕೋತ್ಸವದಲ್ಲಿ ನಾನು ಗಮನಿಸಿದ ಕೆಲವು ವಿಷಯಗಳು:

* ಅನೇಕ ಸರಕಾರಿ ಅಧಿಕಾರಿಗಳು ಭಾರಿ ಸಂಖ್ಯೆಯಲ್ಲಿ ಪುಸ್ತಕವನ್ನು ಖರೀದಿಸಿದ್ದು!!!

*ಬೆಂಗಳೂರಿನಲ್ಲಿ ಕನ್ನಡ ಬಾಡುತ್ತಿದೆ ಎಂಬ ಮಾತು ಕೇಳಿ ಬಂದರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳೇ ಮಾರಾಟವಾಗಿದ್ದು.

*ವಿಜಯಕರ್ನಾಟಕದಲ್ಲಿ ಪ್ರಕಟವಾಗುವ ಅಂಕಣಗಳನ್ನು ಪುಸ್ತಕವಾಗಿ ತಂದವುಗಳಿಗೆ ಭಾರಿ ಬೇಡಿಕೆ.

*ಎಲ್ಲ ಪ್ರಕಾಶನಗಳೂ ತಮ್ಮ ನಾಮಮುದ್ರೆಯಿರುವ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದರೆ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇನ್ನು ಕೆಲವೇ ಪ್ರಕಾಶನಗಳು ಮಾತ್ರ  ಕಾಗದದ ಚೀಲಗಳನ್ನು ಬಳಸಿದ್ದು.

*ಕನ್ನಡ ಆಡಿಯೋ ಡಾಟ್ ಕಾಮ್ ನ ಮಳಿಗೆಯಲ್ಲಿ ಇಟ್ಟ ಕನ್ನಡದ ಬರಹವನ್ನು ಉಳ್ಳ ಟಿಶರ್ಟ್ ಎಲ್ಲರ ಗಮನ ಸೆಳೆದದ್ದು.

Sunday, November 16, 2008

ತದಡಿಯ ದಡದಲ್ಲಿ. . . .

ಕೆಲವು ತಿಂಗಳುಗಳ ಹಿಂದೆ ಕರ್ನಾಟಕದ ತುಂಬ ಸುದ್ದಿಯಲ್ಲಿದ್ದ ಸ್ಥಳವೆಂದರೆ 'ತದಡಿ'. ಕಾರಣ ಬಾರಿ ದೀಪಾವಳಿಗೆ ಅಂಕೋಲೆಗೆ  ಹೋದಾಗ ತದಡಿಗೆ ಹೋಗಿ ಬರಬೇಕೆಂಬ ಪ್ಲ್ಯಾನನ್ನು ಮಾಡಿಕೊಂಡೇ ಹೋಗಿದ್ದೆ. ತದಡಿ ನಮ್ಮ ಮನೆಯಿಂದ ಸುಮಾರು 35 ಕಿ.ಮೀ. ದೂರದಲ್ಲಿದೆ. ತದಡಿಯ ಸಮೀಪವೇ ಅಘನಾಶಿನಿ ನದಿ ಸಮುದ್ರವನ್ನು ಸೇರುವುದು. ಆದರೆ ಉತ್ತರಕನ್ನಡ ಇತರ ನದಿಗಳಂತೆ ಅಘನಾಶಿನಿ ನದಿ ಹಾಗೆ ಸಾಮಾನ್ಯವಾಗಿ ಸೇರದೇ ಸಾವಿರಾರು ಎಕರೆಗಳ ಹಿನ್ನೀರಿನ ಪ್ರದೇಶವನ್ನು ನಿರ್ಮಿಸುತ್ತದೆ. ಇದಕ್ಕೆ ಕಾರಣ ಅಘನಾಶಿನಿ ಸಮುದ್ರಕ್ಕೆ ಸೇರುವ ಜಾಗ ತುಂಬ ಚಿಕ್ಕದಾಗಿರುವುದು. ಉಪ್ಪುನೀರಿನ ಪ್ರದೇಶವನ್ನು 'ಗಜ್ನಿ ಪ್ರದೇಶ'ವೆಂದೂ ಕರೆಯುತ್ತರೆ.


ಅಘನಾಶಿನಿ ನದಿ ಅರಬ್ಬೀ ಸಮುದ್ರ ಸೇರುವ ಸ್ಥಳ


ಇದೇ ಮುಂದೆ ಸಾಣೆಕಟ್ಟಾ, ಗೋಕರ್ಣ,ಮಾದನಗೇರಿ,ಹೀರೆಗುತ್ತಿ ಇನ್ನು ಮುಂತಾದ ಊರುಗಳಲ್ಲಿ ಆವರಿಸಿಕೊಂಡಿದೆ. ಪ್ರದೇಶ ಜೀವ ವೈವಿಧ್ಯತೆಗೆ ಹೆಸರಾಗಿದ್ದು ಕರ್ನಾಟಕದ ಪ್ರಮುಖ ಮ್ಯಾಂಗ್ರೂವ್ ಕಾಡುಗಳ ತಾಣವಾಗಿದೆ.


ಸಮೀಪದ ಸಾಣಿಕಟ್ಟಾದಲ್ಲಿ ಸುಮಾರು 300 ವರ್ಷಗಳಿಂದಲೂ ಉಪ್ಪನ್ನು ಉತ್ಪಾದಿಸುತ್ತ ಬರಲಾಗಿದೆ.ಇಂದು ಇದು ನಮ್ಮ ಕರ್ನಾಟಕದ ಅತೀ ದೊಡ್ಡ ಉಪ್ಪು ತಯಾರಿಕಾ ಕೇಂದ್ರ.ಮೀನುಗಾರಿಕೆ ಇಲ್ಲಿನ ಪ್ರಮುಖ ಜೀವನೋಪಾಯವಾಗಿದ್ದು ಸುತ್ತಮುತ್ತಲಿನ ಸುಮಾರು 9000 ಜನರು ಇದರಲ್ಲಿ ತೊಡಗಿದ್ದಾರೆ.ಅಲ್ಲದೇ ವರ್ಷಕ್ಕೆ 5 ಕೋಟಿಗೂ ಹೆಚ್ಚಿನ ಆದಾಯವನ್ನು ಹೊಂದಿರುವ ಇಲ್ಲಿನ ಗಾಂವಕರ ಮೈನ್ಸ್ ಚಿಪ್ಪು ಸಂಗ್ರಹಣಾ ಕೇಂದ್ರದಲ್ಲಿ ಸಾವಿರಾರು ಜನರು ಕೆಲಸವನ್ನು ಮಾಡುತ್ತಿದ್ದಾರೆ.ಜೀವ ವೈವಿಧ್ಯತೆಯ ತಾಣವಾದ ತದಡಿಯ ಉಪ್ಪು ನೀರಿನ ಪ್ರದೇಶಕ್ಕೆ ಅನೇಕ ಪಕ್ಷಿಗಳೂ ಆಗಾಗ ವಲಸೆ ಬರುತ್ತವೆ. 'ಕಗ್ಗ' ಎಂಬ ವಿಶೇಷ ಭತ್ತದ ತಳಿಯನ್ನು ಬೆಳೆಯಲಾಗುತ್ತಿದ್ದು ಅದನ್ನು ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತದೆ.1975ರಲ್ಲಿ ಅಘನಾಶಿನಿ ನದಿಯ ಉಪ್ಪುನೀರಿನ ಹಿನ್ನೀರಿನ ಪ್ರದೇಶದಲ್ಲಿ ಹಿರೇಗುತ್ತಿ ಮತ್ತು ಮಾದನಗೇರಿ ಸಮೀಪದ ಸಮೀಪದ ಸುಮಾರು 1800ಎಕರೆಗಳಷ್ಟು ಜಾಗವನ್ನು ಕಾರವಾರದ ಬಿಣಗೆಯ ಬಲ್ಲಾರ್ ಪುರ ರಾಸಾಯನಿಕ ಕಾರ್ಖಾನೆಗೆ ಉಪ್ಪು ತಯಾರಿಸಲೆಂದು ಬಿಟ್ಟು ಕೊಡಲಾಯಿತು. ಇದರಿಂದ ಅಘಾನಾಶಿನಿಯ ಜೀವಸಂಕುಲದ ಮೇಲೆ ಮತ್ತು ಇಲ್ಲಿನ ಮೀನುಗಾರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿ ಆಗಿನ ಸಂಸದರಾದ ಬಿ.ವಿ.ನಾಯಕರು ತಮ್ಮದೇ ಸ್ವಂಥ ದುಡ್ಡಿನಿಂದ ಕೇಸನ್ನು ಸರಕಾರದ ವಿರುದ್ಧ ದಾಖಲಿಸಿ ಪುನಃ ಜಾಗವನ್ನು ಅಲ್ಲಿನ ಜನರಿಗೆ ಕೊಡಿಸಿದರು. ತೊಂಭತ್ತರ ದಶಕದಲ್ಲಿ ತದಡಿಯಲ್ಲಿ ಹಡಗು ಒಡೆಯುವ ಕೇಂದ್ರವಿದ್ದು ಇಲ್ಲಿನ ಮ್ಯಾಂಗ್ರೂವ ಕಾಡುಗಳಿಗೆ ಮತ್ತು ಜನಜೀವನಕ್ಕೆ ಉಂಟಾಗುತ್ತಿದ್ದ ಹಾನಿಯನ್ನು ಮುಂದಿಟ್ಟು ಅದನ್ನು ಮುಚ್ಚಿಸಲಾಯಿತು.



ಮುಂದೆ 1991ರಲ್ಲಿ ಡೆನ್ಮಾರ್ಕ್ ದೇಶದ ಸಹಾಯದಿಂ 250ಮೀ ಉದ್ದದ ಬಂದರು ನಿರ್ಮಾಣದೊಂದಿಗೆ ಮೀನುಗಾರಿಕೆಯ ಆಧುನೀಕರಣಕ್ಕೂ ಹೆಚ್ಚಿನ ಒತ್ತನ್ನು ನೀಡಲಾಯಿತು. ಬಹುಷಃ ಸರಕಾರ ತದಡಿಯ ಜನಜೀವನಕ್ಕೆ ತೊಂದರೆಯಾಗದಂತೆ ಮಾಡಿದ ಕಾರ್ಯವಿದೊಂದೇ ಇರಬೇಕು.

ಅನಂತರ ಶುರುವಾಯಿತು ನೋಡಿ ಸರಕಾರದ ಪರಿಸರ ಘಾತುಕ ಯೋಚನೆಯಿಲ್ಲದ ಯೋಜನೆಗಳ ಸರಮಾಲೆ. 1996ರಲ್ಲಿ ಯಾಂತ್ರಿಕೃತ ದೋಣಿ(ಬಾರ್ಜ್) ಮೇಲೆ 4 ಶಕ್ತಿ ತ್ಪಾದನಾ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು ಸ್ರಕಾರ ಮುಂದಿಟ್ಟಿತು. ಆದರೆ ಯೋಜನೆಯಲ್ಲಿ ಶಕ್ತಿ ಉತ್ಪಾದನಾ ಕೇಂದ್ರಕ್ಕೆ ಬೇಕಾಗುವ ಡೀಸೆಲ್ ಸೋರಿಕೆ ಹಾಗೂ ಶಕ್ತಿ ಉತ್ಪಾದನಾ ಕೇಂದ್ರಲ್ಲಿ ಉಂಟಾದ ಶಾಖವನ್ನು ಹೊರತೆಗೆಯಲು ಅಘನಾಶಿನಿಯ ನೀರನ್ನೇ ಉಪಯೋಗಿಸುವ ಯೋಚನೆ ಇದ್ದುದರಿಂದ ಇಲ್ಲಿನ ಪರಿಸರ ಸಂತುಲನಕ್ಕೆ ಹಾನಿಯಗುವುದು ಖಾತರಿಯಾಗಿತ್ತು. ಆದ್ದರಿಂದ ಜಾಗೃತರಾದ ಜನರು ತೀವ್ರವಾಗಿ ಇದನ್ನು ವಿರೋಧಿಸಿ ಕೊನೆಗೂ 1999ರಲ್ಲಿ ಯೋಜನೆಯನ್ನು ಸರಕಾರ ಹಿಂತೆಗೆದುಕೊಳ್ಳುವಂತೆ ಮಾಡಿದರು.



ಯೋಜನೆಯನ್ನು ದಕ್ಷಿಣ ಕೋರಿಯಾದ ಕಂಪನಿಗೆ ಗುತ್ತಿಗೆಯಾಗೂ ನೀಡಿತು.ಆದರೆ ನೈಸರ್ಗಿಕ ಬಂದರಾದ ತದಡಿಯನ್ನು ವಿಸ್ತರಿಸಬೇಕಾದರೆ ಇಲ್ಲಿನ ಹಿನ್ನೀರನ ಜಾಗವನ್ನು ಆಳವಾಗಿ ತೋಡಬೇಕಾಗುತ್ತದೆ. ಅದರಿಂದ ಇಲ್ಲಿನ ಪೂರ್ಣ ಪರಿಸರದ ಸಮತೋಲನವೇ ಹೇಳ ಹೆಸರಿಲ್ಲದಂತೆ ಹಾಳಾಗಿಹೋಗುದಂತು ಖಚಿತವಾಗಿತ್ತು. ಇವೆಲ್ಲವೂ ಗೊತ್ತಿದ್ದರೂ ಸರಕಾರ ತೆಗೆದುಕೊಂಡ ಹುಂಭ ನಿರ್ಧಾರವನ್ನು ಸ್ಥಳೀಯರು ವಿರೋಧಿಸಿದರು.

ಇದೇ ಸಮಯದಲ್ಲಿ ಕರ್ನಾಟಕದ ಮುಖ್ಯ ಬಂದರಾದ ಕಾರವಾರದ ಬಂದರನ್ನು ಅಲ್ಲಿನ ಸೀಬರ್ಡ್ ವಶಕ್ಕೆ ಕೇಂದ್ರ ಸರಕಾರ ನೀಡಿದಾಗ ಸರ್ಕಾರಕ್ಕೆ ತದಡಿಯಲ್ಲಿ ಬಂದರನ್ನು ವಿಸ್ತರಿಸುವುದು ಈಗ ಅನಿವಾರ್ಯವಾಗಿದೆ.

ಅಲ್ಲದೇ ಕೇಂದ್ರ ಸರಕಾರವೂ 2020 ವೊಳಗೆ 20,000 ಮೆಗಾವಾಟ್ ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ದೇಶದಲ್ಲಿ 5 ಅಲ್ಟ್ರಾ ಮೆಗಾ ಪ್ರೊಜೆಕ್ಟ್ಗಳನ್ನು ರೂಪಿಸಿದ್ದು ಅದರಲ್ಲಿ ತದಡಿಯಲ್ಲಿ ಉಷ್ಣಸ್ಥಾವರವನ್ನು ಸ್ಥಾಪಿಸುವುದು ಒಂದಾಗಿದೆ. ಉಷ್ಣಸ್ಥಾವರ ನಿರ್ಮಿಸಲು ಕಲ್ಲಿದ್ದಲು ಅವಶ್ಯ.ಕೇಂದ್ರ ಸರಕಾರದ ಪ್ರಕಾರ ಉಷ್ಣಸ್ಥಾವರವನ್ನು ನಿರ್ಮಿಸುವ ಜಾಗದ ಹತ್ತಿರ ಕಲ್ಲಿದ್ದಲು ಗಣಿ ಇರಬೇಕೆ ಅಥವಾ ಅದನ್ನು ತರಿಸಿಕೊಳ್ಳಲು ಉತ್ತಮ ಬಂದರಿರಬೇಕು.

ಕರ್ನಾಟಕ ರಾಜ್ಯ ಸರಕಾರಕ್ಕೆ ಇಂತಹ ಅವಕಾಶವನ್ನು ಕಳೆದುಕೊಳ್ಳುವ ಆಸೆಯಿಲ್ಲ. ಅಲ್ಲದೆ ಇದರಿಂದ ಶಕ್ತಿ ಉತ್ಪಾದನೆಯಾಗುವುದರೊಂದಿಗೆ ರಾಜ್ಯಸರಕಾರ ಮೊದಲೇ ಯೋಚಿಸಿದಂತೆ ಒಂದು ಬಂದರೂ ಸಹ ನಿರ್ಮಾಣವಾಗುವುದು. ಆದರೆ ರಾಜ್ಯ ಸರಕಾರಕ್ಕೂ ಗೊತ್ತು ಇಲ್ಲಿನ ಪರಿಸರವು ಜೈವಿಕವಾಗಿ ತುಂಬ ಸೂಕ್ಷ್ಮತೆಯ ಪ್ರದೇಶವೆಂದು. ಕೊನೆಗೂ ತಾತ್ಕಾಲಿಕವಾಗಿ ಇಲ್ಲಿನ ಯೋಜನೆಯನ್ನು ಕೈಬಿಟ್ಟಿದ್ದು ಬಳ್ಳಾರಿಯಲ್ಲಿ ಹೊಸದನ್ನು ಪ್ರಾರಂಭಿಸಿದೆ.

ತದಡಿ ಯೋಜನೆಯಿಂದ ಸ್ಥಳೀಯರಿಗೆ ತುಂಬಾ ತೊಂದರೆಗಳುಂಟು.ಒಂದು ಇಲ್ಲಿ ಉಷ್ಣಸ್ಥಾವರವನ್ನು ನಿರ್ಮಿಸಿದ್ದೇ ಆದಲ್ಲಿ ಅದರಿಂದ ವರ್ಷಕ್ಕೆ ಸುಮಾರು ಹದಿನೈದು ಲಕ್ಷ ಟನ್ ಗಳಷ್ಟು ಬೂದಿಕಣಗಳು ಉತ್ಪಾದನೆಯಾಗುವುದು. ಬೂದಿಯ ಕಣಗಳು ಹಲವಾರು ವಿಕಿರಣ ಸೂಸುವ ಪದಾರ್ಥಗಳನ್ನು ಹೊಂದಿದ್ದು ಅದನ್ನು ಸರಿಯಾಗಿ ನಿರ್ವಸಹಿಸದಿದ್ದಲ್ಲಿ ಅನೇಕ ಮಾರಣಾಂತಿಕ ರೋಗಗಳಿಗೆ ಅದು ಎಡೆ ಮಾಡಿಕೊಡಬಲ್ಲದು.ಇನ್ನು ಶಾಖೋತ್ಪನ್ನ ಸ್ಥಾವರದಲ್ಲಿ ಉತ್ಪತ್ತಿಯಾಗುವ ಶಾಖವನ್ನು ತೆಗೆಯಲು ಸಮೀಪದ ಸಮುದ್ರದ ನೀರನ್ನೇ ಬಳಸುವ ವಿಚಾರವಿದ್ದು ಅಲ್ಲಿನ ಜೀವಸಂಕುಲ ಮತ್ತು ಮೀನುಗಾರಿಕೆಯ ಮೇಲೆ ಪರಿಣಾಮ ಬೀರಬಲ್ಲದು. ಯೋಜನೆಗೆ 2500 ಎಕರೆ ಜಾಗದ ಅವಶ್ಯಕತೆಯಿದ್ದು ಸರಕಾರ ಸುಮಾರು 1800 ಎಕರೆ ಪ್ರದೇಶವನ್ನು ಹೊಂದಿದ್ದು ಇನ್ನು 700 ಎಕರೆ ಜಾಗವನ್ನು ಜನರಿಂದ ಪಡೆಯಬೇಕಿದೆ.ಹೀಗೆ ಇದು ಅನೇಕ ಕುಟುಂಬಗಳ ಎತ್ತಂಗಡಿಗೂ ಕಾರಣವಾಗಬಲ್ಲುದು. ತದಡಿಯ ಯೋಜನೆಯಿಂದ ಇನ್ನೂ ಅನೇಕ ದುಷ್ಪರಿಣಾಮಗಳಿದ್ದು ಅವುಗಳನ್ನು ವಿವರಿಸುವ ವರದಿಯನ್ನು ಉತ್ತರಕನ್ನಡದ ಸ್ಥಳೀಯ ಪರಿಸರ ಸಂಘಟನೆಯೊಂದು ಇತ್ತೀಚೆಗೆ ಹೊರತಂದಿದೆ.

ಯೋಜನೆಯು ಕರ್ನಾಟಕದ ವಿದ್ಯುಚ್ಚಕ್ತಿಯ ಬೇಡಿಕೆಯನ್ನು ತಣಿಸಲು ಸಹಕಾರಿಯಾಗಬಲ್ಲುದು ಆದರೆ ಇದಕ್ಕೋಸ್ಕರ ಅತ್ಯಂತ ಮಧುರ ಭಾಂಧವ್ಯದಿಂದ ಹೊಂದಿಕೊಂಡು ಬಾಳುತ್ತಿರುವ ಜೀವಸಂಕುಲದ ಸಮತೋಲನವನ್ನು ಹಾಳುಮಾಡಿ ಇದನ್ನು ಅನುಷ್ಠಾನಗೊಳಿಸುವುದು ಸರಿಯಲ್ಲ. ಅದರ ಬದಲು ನಾವು ಅಸಂಪ್ರದಾಯಿಕ ಶಕ್ತಿ ಮೂಲಗಳ ಕಡೆಗೆ ಗಮನವನ್ನು ಹರಿಸಿ ಶಕ್ತಿ ಬೇಡಿಕೆಯನ್ನು ಪೂರೈಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ.