Showing posts with label ಗಂಗಾವಳಿ. Show all posts
Showing posts with label ಗಂಗಾವಳಿ. Show all posts

Tuesday, July 30, 2013

ನೆನೆವುದೆನ್ನ ಮನಂ ಅಂಕೋಲೆಯ‌ ಸೂರ್ಯೋದಯ‍-ಸೂರ್ಯಾಸ್ತಗಳಂ..!!

ಕನ್ನಡದ ಆದಿಕವಿ ಪಂಪ ತನ್ನ "ವಿಕ್ರಮಾರ್ಜುನ ವಿಜಯ"ದಲ್ಲಿ ಸೂರ್ಯೊದಯ‍-ಸೂರ್ಯಾಸ್ತಗಳೆರಡನ್ನು ತನ್ನ ಕಾವ್ಯವಸ್ತುವಿಗೆ ಬೇಕಾದಂತೆ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಅದರಲ್ಲೂ ಕರ್ಣನ ಜೀವನದ ಪ್ರಮುಖ ಘಟ್ಟಗಳನ್ನು ಚಿತ್ರಿಸುವಾಗ. ಅದಕ್ಕೆ ಕಾರಣ ಕರ್ಣನು ಸೂರ್ಯನ ಪುತ್ರನೆಂಬುದು.ಅದೇ ರೀತಿ ಕುಮಾರವ್ಯಾಸ, ಕುವೆಂಪು, ಬೇಂದ್ರೆ ಎಲ್ಲರೂ ಸೂರ್ಯೋದಯ‍-ಸೂರ್ಯಾಸ್ತಗಳನ್ನು ತಂತಮ್ಮ ಭಾವಕ್ಕೆ ತಕ್ಕಂತೆ ಚಿತ್ರಿಸಿದ್ದಾರೆ, ಪ್ರತಿಮೆಗಳನ್ನು ಕಟ್ಟಿಕೊಟ್ಟಿದ್ದಾರೆ.

ಈ ರೀತಿ ಕವಿಹೃದಯಕ್ಕೆ ಸ್ಪೂರ್ತಿ ಒದಗಿಸುವ ನೈಸರ್ಗಿಕ ಕ್ರಿಯೆಗಳಲ್ಲಿ ಬಹುಶಃ ಸೂರ್ಯೋದಯ‍-ಸೂರ್ಯಾಸ್ತಗಳು ಮೊದಲು ನಿಲ್ಲುತ್ತವೆ. ನಮ್ಮೆಲ್ಲರನ್ನು ತನ್ನ ಕಿರಣಗಳಿಂದ ಸಲುಹುವ ಸೂರ್ಯ ಕೇವಲ ಶಕ್ತಿಯ ಆಕರವಾಗಿರದೆ ಮನಸ್ಸನ್ನು ಹಿಗ್ಗಿಸುವ ಭಾವಚೇತನವೂ ಆಗಿದ್ದಾನೆ. 

ಕಾಡು ಕಡಲೆರಡು ತುಂಬಿರುವ ತಾಲೂಕು ನಮ್ಮ ಅಂಕೋಲೆ.. ಆದ ಕಾರಣ ಸುಂದರ ಸೂರ್ಯೋದಯ‍-ಸೂರ್ಯಾಸ್ತಗಳನ್ನು ನೋಡಲು ಜಾಗಗಳ ಕೊರತೆಯಿಲ್ಲ. ಸೂರ್ಯೋದಯ‍ ಸಾಮಾನ್ಯ ಬೆಟ್ಟದಾಚೆಯಾದರೆ, ಸೂರ್ಯಾಸ್ತವನ್ನು ಬೆಟ್ಟದಾಚೆ ಅಥವಾ ಸಮುದ್ರದಲ್ಲಿ ನೋಡಬಹುದು. ಸಂಜೆ ಆರಾದರೆ ನಾನು ಸೂರ್ಯಾಸ್ತ ನೋಡಲು ಹೋಗುವ ಸಾಮಾನ್ಯ ಜಾಗವೆಂದರೆ ನಮ್ಮೂರ ಬೊಮ್ಮಯ್ಯ ದೇವರಗುಡಿಯಿರುವ ಗುಡ್ಡ. ಸುತ್ತಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಊರುಗಳು ಇಲ್ಲಿಂದ ಕಾಣುತ್ತವೆ. ಕೆಲವೊಮ್ಮೆ ಸಮುದ್ರ ತೀರಕ್ಕೆ, ಗದ್ದೆ ಬಯಲಿಗೆ ಸೂರ್ಯ ಮುಳುಗುವುದನ್ನು ನೋಡಲು ಹೋದರೆ ಇನ್ನು ಕೆಲಬಾರಿ ನದಿಯ ತೀರಕ್ಕೆ ಹೋಗುತ್ತೇನೆ. ಕಳೆದ ಕೆಲ ವರ್ಷಗಳಿಂದ ನಮ್ಮೂರ ಸುತ್ತಮುತ್ತಲಿನ ಅನೇಕೆಡೆ ಕಂಡ ಸೂರ್ಯಾಸ್ತಗಳಿವು.


















  @ಹೊನ್ನೆಬೈಲ್ ಬೀಚ್

















@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌. .ಇದು ನನ್ನ ಫೇವರಿಟ್ :-)

















@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌

















@ಗಂಗಾವಳಿ ನದಿಯಲ್ಲಿರುವ ಕೂರ್ವೆ ದ್ವೀಪ‌

















@ಬೇಲೇಕೇರಿ ಬೀಚ್

















@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌

















@ಬೇಲೇಕೇರಿ ಬೀಚ್

















@ಬೇಲೇಕೇರಿ ಬೀಚ್

















@ಬೇಲೇಕೇರಿ ಬೀಚ್

















@ಶಿರೂರು..

@ಬೆಳಂಬಾರ‌


















@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌


















@ಸೂರ್ವೆಯ ಬೊಮ್ಮಯ್ಯ ದೇವರ ಗುಡ್ಡ‌

ನಾನಿಲ್ಲಿ ಅಪ್ ಲೋಡ್ ಮಾಡಿರುವ ಪೋಟೋಗಳೆಲ್ಲವೂ ಸೂರ್ಯಾಸ್ತದ ಚಿತ್ರಗಳೇ. ಸೂರ್ಯೋದಯವನ್ನು ಕ್ಲಿಕ್ಕಿಸುವ ಪ್ಲ್ಯಾನ್ ಇದ್ದರೂ ಬೆಳಕು ಹ‌ರಿಯುವ ಮುನ್ನವೇ ಎದ್ದು,  ಚೆನ್ನಾಗಿ  ಸೂರ್ಯೊದಯ ಚೆನ್ನಾಗಿ ಗೋಚರಿಸುವ‌ ಜಾಗಕ್ಕೆ ಹೋಗಿ "ಗೆಟ್ ಸೆಟ್" ಅಂತಾ ಕ್ಯಾಮೆರಾ ಹಿಡಿದು ನಿಲ್ಲಲು ಸೋಮಾರಿತನ. ಆದರೆ ಪ್ಲ್ಯಾನಂತೂ ಇದೆ.

ಅಂದ ಹಾಗೆ ನನ್ನಲ್ಲಿದ್ದ ದಿನಕರ ಚೌಪದಿಯಲ್ಲಿ ದಿನಕರ ದೇಸಾಯಿಯವರು  (ದಿನಕರನೆಂದರೂ ಸೂರ್ಯನೇ :‍-)) ಅಂಕೋಲೆಯ ಸೂರ್ಯಾಸ್ತ‍-ಸೂರ್ಯೋದಯಗಳ ಬಗ್ಗೆ ಏನಾದರೂ ಚುಟುಕನ್ನು ಬರೆದಿದ್ದಾರೆಯೇ ಎಂಬ ಕೂತುಹಲದಲ್ಲಿ ನೋಡಿದಾಗ‌ ಯಾವ ಚುಟುಕಗಳೂ ಕಾಣಸಿಗಲಿಲ್ಲ. ಬಹುಶಃ ವರ್ಣಾನಾತೀತ ಎಂದು ಬಿಟ್ಟಿರಬಹುದು..:-)

Thursday, June 18, 2009

ಹಿಚ್ಕಡ ಕುರ್ವೆ

ಅಂಕೋಲೆಯ ಕಡೆ ಮಳೆ ಜೋರಾಗಿ ನಾಲ್ಕಾರು ದಿನ ಬಿತ್ತೆಂದರೆ ಪ್ರಚಾರಕ್ಕೆ ಬರುವ ಸ್ಥಳವೆಂದರೆ ಕುರ್ವೆ, ಒಂದು ಚಿಕ್ಕ ದ್ವೀಪ. ಅಂಕೋಲೆಯ ಗಂಗೆ ಗಂಗಾವಳಿ(ಗೆಳೆಯ ತೇಜುವಿನ ಹೊಸ ನಾಮಕರಣ 'ನಮ್ ಗಂಗು') ನದಿ ಧಾರವಾಡದ ಹತ್ತಿರ ಆಗಮಿಸಿ ಅಂಕೋಲಾ ಮತ್ತು ಕುಮಟಾ ತಾಲೂಕಿನ ಸರಹದ್ದಿನಲ್ಲಿ ಅರಬ್ಬೀ ಸಮುದ್ರ ಸೇರುತ್ತದೆ. ನದಿಯ ಮುಖಜಭೂಮಿಯಿಂದ 4 ಕಿ.ಮೀ. ಹಿಂದೆ ವಜ್ರಾಕಾರದ ಈ ಪುಟ್ಟ ದ್ವೀಪವಿದೆ. ನದಿ ಮಧ್ಯದಲ್ಲಿರುವ ಇಂತಹ ಚಿಕ್ಕ ದ್ವೀಪಗಳಿಗೆ ಸಾಮಾನ್ಯವಾಗಿ 'ಕುರ್ವೆ' ಎನ್ನುತ್ತಾರೆ. ಉತ್ತರ ಕನ್ನಡದಲ್ಲಿ ಅಘನಾಶಿನಿ ನದಿಯ ಐಗಳ ಕುರ್ವೆ, ಶರಾವತಿ ನದಿಯ ಮಾವಿನಕುರ್ವೆ ಹೀಗೆ ನಾಲ್ಕಾರು ಪ್ರಸಿದ್ದವಾದ ಕುರ್ವೆಗಳಿವೆ. ಸಾಮಾನ್ಯವಾಗಿ ಸಮೀಪದಲ್ಲಿರೋ ಊರ ಹೆಸರಿನಿಂದಲೋ ಅಥವಾ ಅಲ್ಲಿ ವಾಸಿಸುವ ಜನಾಂಗದ ಹೆಸರಿನಿಂದಲೇ ಆ ಕುರ್ವೆಯನ್ನು ಕರೆಯಲಾಗುತ್ತದೆ. ನಮ್ಮ ಈ ಕುರ್ವೆಯ ಸಮೀಪದಲ್ಲಿ ಹಿಚ್ಕಡ ಎಂಬ ಊರು ಇರುವುದರಿಂದ ಇದನ್ನು 'ಹಿಚ್ಕಡ ಕುರ್ವೆ' ಎಂದು ಕರೆಯುತ್ತಾರೆ.





ಸುಮಾರು 44 ಎಕರೆ ವಿಸ್ತೀರ್ಣದ ಈ ನಡುಗಡ್ಡೆಯ ತುಂಬ ತೆಂಗಿನಮರಗಳು ಇವೆಯೆಂದು ಕೇಳಿದ್ದೆ. ಮೊನ್ನೆ ಮೇ ತಿಂಗಳ ಕೊನೆಯಲ್ಲಿ ಮನೆಗೆ ಹೋದಾಗ ಅಲ್ಲಿಗೆ ಹೋಗಿಬಂದಾಯಿತು.. ಈ ಹಿಂದೆ ಚಿಕ್ಕವನಿರುವಾಗ ಕಾಳಿನದಿಯಲ್ಲಿ ಮರದ ದೋಣಿಯಲ್ಲಿ ಹೋಗಿದ್ದನ್ನು ಬಿಟ್ಟರೆ ಇನ್ನೆಲ್ಲ ಕಡೆ ನದಿ ದಾಟುವಾಗ ಯಾಂತ್ರೀಕೃತ ಬಾರ್ಜಲ್ಲೇ ಹೋಗಿದ್ದು.. ಆದ್ದರಿಂದ ಸುಮಾರು ಒಂದು ದಶಕದ ನಂತರ ಪುನ: ಮರದ ಚಿಕ್ಕ ದೋಣಿಯಲ್ಲು ಹೋಗುವ ಅವಕಾಶ ಸಿಕ್ಕಿತ್ತು..ಕಾಳಿನದಿಯ ಆ ದೋಣಿಗಳಾದರೂ ಸುಮಾರು 12 ರಿಂದ 16 ಜನರನ್ನು ಕೊಂಡೊಯ್ಯುವ ಸಾಮರ್ಥ್ಯವುಳ್ಳವಾದ್ದರಿಂದ ಆ ದೋಣಿಗಳ ಮೇಲೆ ಹೋಗಲು ಅಷ್ಟೊಂದು ಭಯವಾಗುತ್ತಿರಲಿಲ್ಲ. ಆದರೆ ಈ ಪುಟ್ಟ ದೋಣಿಯ ಮೇಲೆ ಹೆದರುತ್ತಲೇ ನಾನು ಮತ್ತು ತೇಜು ಕುರ್ವೆ ಕಾಲಿಟ್ಟಾಯಿತು.. ನದಿ ಮಧ್ಯದಲ್ಲಿ ಸಾಗುವಾಗ ದೂರದಲ್ಲಿನ ಗಂಗಾವಳಿ ರೈಲ್ವೆ ಬ್ರಿದ್ಜು , ನದಿ ಇನ್ನೊಂದು ತೀರದಲ್ಲಿರುವ ಇನ್ನು ಕೆಲ ಹಳ್ಳಿಗಳು ಕಣ್ಣಿಗೆ ಮುದ ನೀಡುತ್ತಿದ್ದವು. ಕೆಲ ನಿಮಿಷಗಳಲ್ಲೇ ಕುರ್ವೆ ದಡ ತಲುಪಿದರೂ ಸಹ ಪುನಃ ಮನೆಗೆ ಹೋಗುವಾಗ ಆ ಪುಟ್ಟ ದೋಣಿಯ ಮೇಲೆ ಹೋಗಬೇಕೆಂಬ ಭಯ ನನಗೆ..

ತೆಂಗಿನ ತೋಟಗಳಿಂದಲೇ ತುಂಬಿದ ಕುರ್ವೆಯಲ್ಲಿ ಸುಮಾರು ಇಪ್ಪತ್ತೈದು ಕುಟುಂಬಗಳಿದ್ದು ಒಂದು ಶಾಲೆ ಇದೆ. ವಿದ್ಯುತ್ತಿನ ಸಂಪರ್ಕ ಕೂಡ ಇದೆ. ತೋಟಗಾರಿಕೆ ಮತ್ತು ಮೀನುಗಾರಿಕೆಯ ಮೇಲೆ ಇಲ್ಲಿನ ಜನ ಅವಲಂಬಿಸಿದ್ದಾರೆ. ಅಲ್ಲಲ್ಲಿ 'ಪಾರ್ಕಿಂಗ್' ಮಾಡಿದ ದೋಣಿಗಳೂ ಕೂಡ ಕಣ್ಣಿಗೆ ಬೀಳುತ್ತಿದ್ದು ಕೆಲವೆಡೆ 'ಕಲ್ಗ' ಎನ್ನೋ ವಿಶೇಷವಾದ ಜೀವಿಗಳಿರೋ ಕಲ್ಲುಗಳು (ಊರ ಕಡೆ ಈ ಕಲ್ಲುಗಳನ್ನು ಕಲ್ಗನ ಮುಯ್ಡು ಎನ್ನುತ್ತಾರೆ) ಕಾಣಸಿಗುತ್ತಿದ್ದವು. ಕೆಲ ತೆಂಗಿನಮರಗಳು ದಂಡೆಯಿಂದ ನಭದೆಡೆಗೆ ನೆಗೆಯುತ್ತಿದ್ದಂತೆ ಭಾಸವಾಗುತ್ತಿದ್ದರೆ ಇನ್ನು ಕೆಲವು ನದಿ ನೀರನ್ನು ಚುಂಬಿಸಲು ಹವಣಿಸುತ್ತಿದ್ದಂತೆ ಅನಿಸುತ್ತಿತ್ತು.





ಇನ್ನು ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಈ ದ್ವೀಪವನ್ನು ಚಳುವಳಿಗಾರರು ಭೂಗತವಾಗುವುದಕ್ಕೆ ಬಳಸಿಕೊಳ್ಳುತ್ತಿದ್ದರಂತೆ. ಈ ನಡುಗಡ್ಡೆಯಲ್ಲಿರುವಾಗ ಗಂಗಾವಳಿ ನಮ್ಮನ್ನು ಸುತ್ತುವರೆದಿದ್ದರಿಂದ "ನಾ ಖೈದಿ ನೀನೆ ಸೆರೆಮನೆ" ಎಂಬ ಮುಂಗಾರುಮಳೆಯ ಲೈನ್ ನೆನಪಿಗೆ ಬರುತಿತ್ತು. ಸಂಜೆಯ ವಿಹಾರಕ್ಕೆ ಹೇಳಿ ಮಾಡಿಸಿದಂತಿರುವ ಈ ಸ್ಥಳದ ಬಗ್ಗೆ ಪ್ರೊ.ಜಿ.ಎಚ್.ನಾಯಕರು "ಪ್ರಕೃತಿಯೇ ಸೌಂದರ್ಯದ ಚಿತ್ರ ಬಿಡಿಸಿದಂತೆ ಇದೆ ಸುತ್ತಮುತ್ತಲಿನ ವಾತಾವರಣ" ಎಂದು ಒಂದೆಡೆ ಬರೆದಿದ್ದಾರೆ. ಆದರೆ ಇಲ್ಲಿನ ಜನರು ತೊಂದರೆಗೊಳಗಾಗುವುದು ಮಳೆಗಾಲದಲ್ಲಿ. ಭಾರೀ ಮಳೆ ಸುರಿಯಿತೆಂದರೆ ಸಾಕು ನಮ್ ಗಂಗುವಿನ ನೀರಿನ ಮಟ್ಟವೇರಿ ಈ ದ್ವೀಪ ಮುಳುಗಲು ಪ್ರಾರಂಭವಾಗುತ್ತದೆ. ಆಗ ಇಲ್ಲಿನ ಜನರಿಗೆ ಆಶ್ರಯ ನೀಡುವ ಸ್ಥಳಗಳೆಂದರೆ ಎಡ ದಂಡೆಯ ಮೇಲಿರುವ ಹಿಚ್ಕಡ ಊರಿನ ಗಂಜಿಕೇಂದ್ರ ಹಾಗೂ ಬಲ ದಂಡೆಯ ಮೇಲಿರುವ ಅಗ್ಗರಗೋಣ ಅಥವಾ ಸಗಡಗೇರಿ ಶಾಲೆಯಲ್ಲಿ ಶುರುಮಾಡುವ ಗಂಜೀಕೇಂದ್ರಗಳು..ಇನ್ನೊಮ್ಮೆ ಮಳೆಗಾಲ ಪ್ರಾರಂಭವಾಗಿದೆ. ನಮ್ ಗಂಗು ಎನಾದರೂ ಮೈತುಂಬ ಹರಿದರೆ ಮತ್ತೆ ಇಲ್ಲಿನ ಜನರಿಗೆ ಕಷ್ಟ ತಪ್ಪಿದ್ದಲ್ಲ. ಕಳೆದ ಬಾರಿಯೂ ಕುರ್ವೆಯನ್ನು ಮುಳುಗಿಸಿ ಮಂತ್ರಿಗಳೇ ಆಶ್ರಯ ತಾಣಗಳಿಗೆ ಬರುವಂತೆ ಮಾಡಿದ್ದ ನಮ್ ಗಂಗು ಈ ಬಾರಿಯಾದರೂ ಇಲ್ಲಿನ ಜನರ ಮೇಲೆ ಕೃಪೆ ತೋರುವಳೇ ಎಂದು ನೋಡಬೇಕಾಗಿದೆ.