Monday, March 2, 2009

ಅಂಕೋಲೆಯಲ್ಲಿ ನಡೆದ ದಕ್ಷಿಣ ಭಾರತದ ವಾಲಿಬಾಲ್ ಪಂದ್ಯಾವಳಿ

ಕೊನೆಯ ಸೆಮ್ ಗಾಗಿ ಕಾಲೇಜಿಗೆ ಬರುವಾಗಲೇ 'ಇನ್ನು ಕೇವಲ ಹತ್ತು ದಿನಗಳಲ್ಲಿ ಅಂಕೋಲೆಯಲ್ಲಿ ದಕ್ಷಿಣ ಭಾರತ ಮಟ್ಟದ ವಾಲಿಬಾಲ್ ಪಂದ್ಯಾವಳಿ ಇದೆ.ಯಾವ ನೆಪದಲ್ಲಿ ಮನೆಗೆ ಬರಲಿ' ಎಂದು ವಿಚಾರ ಮಾಡುತ್ತಲೇ ಅಂಕೋಲೆಯಿಂ ಫೆಬ್ರುವರಿ 8 ರಾತ್ರಿ ಬಸ್ಸಿಗೆ ಹತ್ತಿದ್ದೆ. ವಾಲಿಬಾಲ್ ಪಂದ್ಯಾವಳಿ ಫೆಬ್ರುವರಿ 17 ರಿಂದ 21 ರವರೆಗೆ ಇತ್ತು.ನನ್ನ ಅದೃಷ್ಟವೋ ಏನೋ 23ರಂದು ಶಿವರಾತ್ರಿ ಕೂಡ ಇತ್ತು. ಕೊನೆಯ ಸೆಮ್ ನಲ್ಲಿ ಪ್ರಾಜೆಕ್ಟ್ ಗಾಗಿ ಪ್ರತೀ ವಾರದ ಸೋಮವಾರ,ಮಂಗಳವಾರ ಮತ್ತು ಬುಧವಾರ ರಜೆಯಿದ್ದುದರಿಂದ ಲ್ಲದೇ ಅದೇ ಸಂದಿನಲ್ಲಿ ಶಿವರಾತ್ರಿ ಬಂದುದರಿಂದ ದೇವರ ನೆಪವೊಡ್ಡಿ ಪಂದ್ಯಾವಳಿಯ ಕೊನೆ ದಿನ ಅಂದರೆ 21ರಂದು ಮನೆ ತಲುಪಿದೆ. ಮಹಿಳೆಯರ ಮತ್ತು ಪುರುಷರ ವಿಭಾಗದ ಅಂತಿಮ ಪಂದ್ಯಗಳು ಮಾತ್ರ ಉಳಿದುಕೊಂಡಿದ್ದವು ಎಂದು ತಿಳಿದಿತ್ತು.






ಪಂದ್ಯಾವಳಿ ನದೆಯುತ್ತಿದ್ದುದ್ದು ಅಗ್ಗರಗೋಣ ಎಂಬ ಗ್ರಾಮದಲ್ಲಿ. ಗಂಗಾವಳಿ ನದಿಯ ಬಲ ದಿಕ್ಕಿನಲ್ಲಿ ಇರುವ ಚೆಂದದ ಊರು. ಹಿಂದೆ ಊರ ಬಗ್ಗೆ ಕೇಳಿದ್ದರೂ ಸಹ ಊರನ್ನು ನೋಡಿರಲಿಲ್ಲ. ಅಲ್ಲದೇ ಊರಿನ ಸೊಬಗನ್ನು ಕುರಿತು ಖ್ಯಾತ ವಿಮರ್ಶಕರಾದ ಪ್ರೊ.ಜಿ.ಎಚ್.ನಾಯಕರು ತಮ್ಮ 'ಗುಣಗೌರವ' ಎಂಬ ಲೇಖನಗಳ ಸಂಕಲನವೊಂದರಲ್ಲಿ ವರ್ಣಿಸಿದ್ದುದನ್ನು ಕೆಲವೇ ದಿನಗಳ ಹಿಂದೆ ಓದಿದ್ದಕ್ಕೋ ಏನೋ ಊರನ್ನು ಕಾಣುವ ಹಂಬಲ ಹೆಚ್ಚಾಗುತ್ತಿತ್ತು.ಅಗ್ಗರಗೋಣಿಗೆ ನಮ್ಮ ಮನೆಯಿಂದ ಗಂಗಾವಳಿ ತಾರಿಯನ್ನು ದಾಟಿ ಹೋಗಬಹುದು ಇಲ್ಲವೇ ರಾಷ್ಟ್ರೀಯ ಹೆದ್ದಾರಿ-17 ಮೂಲಕ ಮಾದನಗೇರಿ ಕ್ರಾಸ್ ವರೆಗೆ ಹೋಗಿ ಅಲ್ಲಿಂದ ಒಳರಸ್ತೆಯಲ್ಲಿ ಹೋಗಬಹುದು. ಬೈಕ್ ಹೊಡೆಯುವ ಚಪಲ ತುಸು ಜಾಸ್ತಿಯೇ ಇದ್ದುದರಿಂದ ಎರದನೇಯ ಆಯ್ಕೆಯನ್ನು ಆಯ್ಕೆಮಾಡಿ ಅಗ್ಗರಗೋಣಿನ ಕಡೆಗೆ ಹೊರಟೆ.ಗಂಗಾವಳಿ ರೈಲ್ವೆ ಬ್ರಿಡ್ಜು, ಅಂಕೋಲೆಯ ಸ್ವಾತಂತ್ರ್ಯ ಹೋರಾಟದಲ್ಲಿ ನಡೆದ ಅನೇಕ ರೋಚಕ ಘಟನೆಗಳಿಗೆ ಸಾಕ್ಷಿಯಾದ ಶಿರೂರು ಮತ್ತು ಉಳುವರೆ ತಾರಿಗಳು ಎಲ್ಲವನ್ನೂ ಮೊದಲ ಬಾರಿಗೆ ನೋಡಿದ ಕಾರಣಕ್ಕಾಗಿ ಮನದಲ್ಲಿ ಏನೋ ಸಾರ್ಥಕತೆಯ ಅನುಭವ.

ಸುಮಾರು 5.30 ಸುಮಾರು ಅಗ್ಗರಗೋಣದ ವಾಲಿಬಾಲ್ ಕ್ರೀಡಾಂಗನವನ್ನು ತಲುಪಿದೆ. ಆದರೆ ಪಂದ್ಯ ಶುರುವಾಗಲು ಇನ್ನೂ ಒಂದುವರೆ-ಎರಡು ಘಂಟೆಗಳು ಬಾಕಿ ಇದ್ದವು. ಏಕಾಂಗಿತನ ಕಾಡಲು ಶುರುವಾಗಿತ್ತು. ಆಗ ನೆನಪಿಗೆ ಬಂದವನು ಬೆಂಗಳುರಿನಲ್ಲಿ ಓದುತ್ತಿದ್ದ ವಿಕ್ಕಿ. ಆತನ ಮನೆಯನ್ನು ಹುಡುಕಿ ಆತನನ್ನು ಭೇಟಿಯಾದ ನಂತರ ಒಬ್ಬೊಬ್ಬರೇ ಪರಿಚಯವಾಗಲು ಶುರುವಾದರು. ಊರಿನ ಸಮೀಪದಲ್ಲೇ ಹರಿಯುತ್ತಿದ್ದ ಗಂಗಾವಳಿಯನ್ನೂ ನೋಡಿ ಆಯಿತು.



ಸೂರ್ಯ ತನ್ನ ದಿನದ ಡ್ಯೂಟಿಯನ್ನು ಮುಗಿಸಾಗಿತ್ತು. ಕ್ರೀಡಾಂಗಣವನ್ನು ಪುನಃ ಸೇರುತ್ತಿದ್ದಂತೆಯೇ ' ಮಹಿಳೆಯರ ಅಂತಿಮ ಪಂದ್ಯ ಕೆಲವೇ ಕ್ಸಃಅಣಗಳಲ್ಲಿ ಶುರುವಾಗಲಿದೆ' ಎಂಬ ಆಕಾಶವಾಣಿ ಹೊರಬಿತ್ತು.






ಹೆಚ್ಚೆಂದರೆ ಎರಡು ಸಾವಿರ ಜನ ಬರಬಹುದು ಎಂಬ ಭ್ರಮೆಯಲ್ಲಿದ್ದ ನನಗೆ ಅಲ್ಲಿನ ಏಳರಿಂದ ಎಂಟು ಸಾವಿರ ಜನರ ಜನಸಾಗರವನ್ನು ಕಂಡಾಗ ಅಚ್ಚರಿಯ ಜೊತೆಗೆ ಖುಷಿಯೂ ಅಯಿತು.ಕೇರಳ ಮತ್ತು ತಮಿಳುನಾಡು ತಂಡಗಳು ಸೆಣಸುತ್ತಿದ್ದವು. ಕೊನೆಯ ಸೆಟ್ ನವರೆಗೆ ಹೋದ ಪಂದ್ಯವನ್ನು ಕೇರಳ 3-2 ರಿಂದ ಗೆದ್ದರೂ ಪ್ರಬಲ ಹೋರಾಟ ನೀಡಿದ ತಮಿಳುನಾಡೂ ಸಹ ಜನರ ಗೌರವಕ್ಕೆ ಪಾತ್ರವಾಯಿತು.ಪುರುಷರ ವಿಭಾಗದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಫೈನಲ್ ಹಂಅವನ್ನು ತಲುಪಿದ್ದವು.



ಹಿಂದಿನ ದಿನವೇ ಬಲಿಷ್ಠ ಕೇರಳವನ್ನು ಸೋಲಿಸಿದ್ದುದರಿಂದ ಕರ್ನಾಟಕವೇ ಫೈನಲ್ ಗೆಲ್ಲಬಹುದು ಎಂಬೆಲ್ಲ ಜನರ ಲೆಕ್ಕಾಚಾರದ ನಡುವೆಯೇ ಪಂದ್ಯ ಪ್ರಾರಂಭವಾಯಿತು. ಆದರೆ ಮೊದಲ ಸೆಟ್ ನಿಂದಲೇ ತನ್ನ ಸೋಲೆಂಬ ಸಮಾಧಿಗೆ ಅಡಿಗಲ್ಲನಿಟ್ಟ ಕರ್ನಾಟಕ ಮುಂದೆ ಚೇತರಿಸಿಕೊಳ್ಳಲಿಲ್ಲ. ಮೊದಲ ಮೂರು ಸೆಟ್ ಗಳನ್ನು ಸೋಲುವುದರ ಮೂಲಕ ಶರಣಾದ ಕರ್ನಾಟಕ , ತಮಿಳುನಾಡಿಗೆ ಜಯವನ್ನು ಬಿಟ್ಟುಕೊಟ್ಟಿತು.



ವಿವರಣೆಗಾರರು ತಮ್ಮ ಕುಚೋದ್ಯ ಮಾತುಗಳಿಂದ ಜನರನ್ನು ನಗಿಸಿದರೂ ಸಹ ಕರ್ನಾಟಕ ಸೋತದ್ದಂತೂ ಜನರಲ್ಲಿ ನಿರಾಶೆ ಮೂಡಿಸಿತ್ತು. ಪಂದ್ಯಾವಳಿ ನಡೆಯಲು ತಮ್ಮಿಂದಾದ ಸಕಲ ಸಹಾಯಗಳನ್ನು ಮಾಡಿದ ಗೋಕರ್ಣದ ಸ್ವಾಮೀಜಿಗಳು ಸಹ ಪಂದ್ಯವನ್ನು ವೀಕ್ಷಿಸಿದ್ದು ವಿಶೇಷ. ರಾತ್ರಿಯೇ ನಮ್ಮ ದೊಡ್ಡಮ್ಮನ ಮಗನ ಜೊತೆ ಬೇಲೇಕೇರಿಯನ್ನು ಸೇರಿದಾಗ ಎರಡು ಕಾಲಾದರೂ ವಾಲಿಬಾಲ್ ನೆಪದಲ್ಲಿ ಅಗ್ಗರಗೋಣದಂತಹ ಚೆಂದದ ಊರನ್ನು ನೋಡಿದ್ದು ಮನಸ್ಸಿಗೆ ಖುಷಿ ಕೊಟ್ಟಿತ್ತು.

No comments: