Sunday, May 3, 2009

ಹೀಗೆರಡು ಕವನಗಳು

ಅಂದು-ಇಂದು

ಹೋರಾಟದ ನೆಲ ನಮ್ಮ ಅಂಕೋಲೆ
ಬಿಡಿಸಲು ಮುಂದಾಗಿತ್ತು ತಾಯ ಸಂಕೋಲೆ
ಊರು-ಕೇರಿಗಳಲ್ಲಿ ಹತ್ತಿತ್ತು ಸ್ವಾತಂತ್ರ್ಯ ಸಂಗ್ರಾಮದ ಕಿಡಿ
ಎಲ್ಲರ ಗುರಿಯೂ ಒಂದೇ: 'ಮಾಡು ಇಲ್ಲವೇ ಮಡಿ'.

ಇಡೀ ಕರುನಾಡಿಗೆ ಆಯಿತಿದು ಹೋರಾಟಕ್ಕೆ ಮಾದರಿ
ಯಾವ ಹಿಂಸೆಗೂ ಜನರು ಹೋಗಲಿಲ್ಲ ಚದುರಿ
ಕೊನೆಗೂ ದೇಶವಾಯಿತು ದಾಸ್ಯದಿಂದ ಮುಕ್ತಿ
ಇದಕೆ ಕಾರಣ ಜನರ ಒಗ್ಗಟ್ಟಿನಲ್ಲಿದ್ದ ಶಕ್ತಿ.

ಇಂದೆಲ್ಲಿ ಹೋಯಿತು ಅಂದಿನ ಆ ಒಗ್ಗಟ್ಟು?
ಎಲ್ಲರ ಮನಸ್ಸಿನಲ್ಲೂ ಅಧಿಕಾರದ ಪಟ್ಟು
ಪಕ್ಷಗಳಿಂದ ಜನರಲ್ಲಿ ಎದ್ದಿದೆ ಬಿರುಕು
ಇನ್ನಾದರೂ ಆಗಬೇಕು ನಾವೆಲ್ಲ ಚುರುಕು.

ಬನ್ನಿ, ಪುನಃ ಒಂದಾಗೋಣ ನಾವೆಲ್ಲ
ಜೊತೆಗೂಡಿ ತಿನ್ನೋಣ ಬೇವು-ಬೆಲ್ಲ
ಎಲ್ಲರ ಗುರಿಯೂ ಆಗಲಿ ಜನತೆಯ ಸುಖ
ಇಷ್ಟೂ ತಿಳಿಯದಿರೆ ಆತನೊಬ್ಬ ಮೂರ್ಖ.


ಕನಸು

ಮೊನ್ನೆ ಕನಸಲಿ ಆ ದೇವರು ಬಂದ
ನಿನಗಾವ ವರ ಬೇಕು ಬೇಡಿಕೊ ಎಂದ
ಬದುಕಿರುವಾಗಲೇ ಸ್ವರ್ಗವ ಕಾಣಬೇಕು, ನಾನೆಂದೆ
ದೇವರೆಂದ: ಅಂಕೋಲೆಗೆ ಹೋಗೋಣ ನಡಿ ಮುಂದೆ.

ನಾನೆಂದೆ, ಮೊದಲಿನಂತಿಲ್ಲ ಆ ನನ್ನ ತಾಯ್ನಾಡು
ನೀನೇ ಏನಾದರೂ ಪವಾಡ ಮಾಡು
ಒಂದೆಡೆ ಮ್ಯಾಂಗನೀಸ್ ಧೂಳು, ಇನ್ನೊಂದೆಡೆ ಕಾಡೂ ಬೋಳು
ಇನ್ನು ಯಾರ ಕಣ್ಣಿಗೂ ಕಾಣದ ಬಡವನ ಗೋಳು.

ದೇವರೇನು ಹೇಳಲಿಲ್ಲ, ಆತ ಸುಮ್ಮನೆ ನಕ್ಕ
ಅವನ ಆ ನಗೆಗೆ ಮ್ಯಾಂಗನೀಸ್ ಧೂಳು ಚೊಕ್ಕ
ನಿಮಿಷಮಾತ್ರದಲಿ ಬೋಳಾದ ಕಾಡಾಯಿತು ದಟ್ಟ
ಬಡವರೂ ಸ್ಥಿತಿವಂತರಾಗಿ ಸುಧಾರಿಸಿಕೊಂಡರು ತಮ್ಮ ಮಟ್ಟ.

ಆದರೆ ನಾನು ಕಂಡಿದ್ದು ಕನಸು, ನಡೆದಿರಲಿಲ್ಲ ಯಾವ ಮ್ಯಾಜಿಕ್ಕು
ನಾವೇ ಮುರಿಯಬೇಕು ಧೂಳು ಹೆಚ್ಚಿಸುವವರ ಸೊಕ್ಕು
ಕಾಡನ್ನು ಬೆಳೆಸಿ ನಾಡನ್ನು ಮಾಡಬೇಕು ಹಸಿರು
ಬಡವರ ಏಳಿಗೆಯೇ ಆಗಬೇಕು ನಮ್ಮ ಉಸಿರು.

No comments: